ರೋಣ: ವಿದ್ಯಾದಾನವು ಕೋಟಿ ಪುಣ್ಯ ಕಾರ್ಯಕ್ಕಿಂತ ಶ್ರೇಷ್ಠವಾಗಿದೆ. ಆದ್ದರಿಂದ ತಮ್ಮಲ್ಲಿರುವ ವಿದ್ಯೆ ವಿದ್ಯಾರ್ಥಿಗಳಿಗೂ ಧಾರೆ ಎರೆಯುವ ಮೂಲಕ ಭವಿಷ್ಯದಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ. ಬಿ.ವಿ. ಶಿರೂರ ಹೇಳಿದರು.
ವೈಯಕ್ತಿಕ ಜೀವನದ ನೀತಿ, ನಡೆ ಒಳ್ಳೆಯ ಬದುಕನ್ನು ಕಟ್ಟಿಕೊಡುವದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ನಿಷ್ಠೆಯಿಂದ ಇರಬೇಕು. ಆದ್ದರಿಂದ ಶಿಕ್ಷಕರು ಚಿಂತಾಪಾಹಾರಿ ಶಿಕ್ಷಕರಾಗಬೇಕು. ಅಂದಾಗ ಶಿಕ್ಷಣ ಸರಿಯಾದ ಮಾರ್ಗದತ್ತ ನಡೆಯುವುದರ ಜತೆಗೆ ಸಮಾಜಕ್ಕೆ ಒಳಿತಾಗುತ್ತದೆ. ಶಿಕ್ಷಕ ಸದಾ ಅಭ್ಯಾಸಿಯಾಗಿರಬೇಕು ಎಂದರು.
ಪುರಸಭೆ ಸದಸ್ಯ ಮಿಥುನ ಪಾಟೀಲ ಮಾತನಾಡಿ, ಭವಿಷ್ಯದ ಜೀವನ ಸುಂದರವಾಗಿ ರೂಪಿಸಿಕೊಳ್ಳಲು ಶಿಕ್ಷಣವು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ ಎಂದರು.ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ಎ.ರಡ್ಡೇರ ಮಾತನಾಡಿ, ಮಕ್ಕಳ ಮನಸ್ಸಿಗೆ ತಲುಪುವಲ್ಲಿ ವಿಷಯ ಬೋಧಿಸುವ ಶಿಕ್ಷಕನಾಗಬೇಕು. ಅಂದಾಗ ಬೋಧನೆ ಫಲಕಾರಿಯಾಗುವುದು. ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕು. ಕಲಿಕೆ ಭವಿಷ್ಯದ ಬದುಕಿನಲ್ಲಿ ಪ್ರತಿಬಿಂಬವಾಗಲಿದೆ. ಪಠ್ಯ ಪುಸ್ತಕವು ಸತ್ಯದ ಚೌಕಟ್ಟಾಗಿದೆ. ಪಠ್ಯ ಪುಸ್ತಕದಲ್ಲಿನ ಆಶಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕನ ಮೇಲೆ ಸಾಮಾಜಿಕ ಜವಾಬ್ದಾರಿ ಅತೀ ಮುಖ್ಯವಾಗಿದೆ. ಆರೋಗ್ಯ ಸಂಪತ್ತು, ಮನಸ್ಥಿತಿ ಸುಧಾರಿಸಿಕೊಳ್ಳಿ, ಸಾಧಕರ, ಮಹನೀಯರ ಜೀವನ ಚರಿತ್ರೆ ಮಕ್ಕಳಿಗೆ ಹೇಳಿ. ಶಾಲಾ, ಕಾಲೇಜಗಳು ಮನಸ್ಸು ಪರಿವರ್ತನಾ ಕೇಂದ್ರಗಳಾಗಿವೆ ಎಂದರು.
ವಿದ್ಯಾರ್ಥಿ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಾಚಾರ್ಯ ಡಾ. ವೈ.ಎನ್. ಪಾಪಣ್ಣವರ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ವಿ.ಬಿ. ತಾಳಿ, ಆಡಳಿತಾಧಿಕಾರಿ ಬಿ.ಎಫ್. ಚೇಗರಡ್ಡಿ, ಮಲ್ಲಿಕಾರ್ಜುನ, ನಜಮಾ ಸಂಕನೂರ, ಎಚ್.ಆರ್. ದೊಡ್ಡಮನಿ, ಎಸ್.ಆರ್. ಐಹೊಳ್ಳಿ, ಜಿ.ವಿ.ನಾಯಕ, ಎಸ್.ಎಸ್.ಗೋದಿ ಮುಂತಾದವರು ಉಪಸ್ಥಿತರಿದ್ದರು. ಶ್ವೇತಾ ಮುಧೋಳ, ಚನ್ನಬಸು ಸರಗಣಾಚಾರಿ ನಿರೂಪಿಸಿದರು. ಮಲ್ಲಿಕಾರ್ಜುನ ಹೊಸಮನಿ ವಂದಿಸಿದರು.