ಅಭಿಮಾನಿ ಬಳಗದಿಂದ ವಿಶೇಷ ಚೇತನರಿಗೆ ನೆರವು ಕಾರ್ಯಕ್ರಮದಲ್ಲಿ ಜಿ.ಬಿ.ವಿನಯಕುಮಾರ ಅಭಿಪ್ರಾಯ
ಪ್ರಜಾಪ್ರಭುತ್ವದಲ್ಲಿ ಜನರೇ ರಾಜನಾಗಿದ್ದು, ಇಂತಹ ಅರಿವು ಜನರಲ್ಲಿ ಬರಬೇಕೆಂದರೆ, ಬದಲಾವಣೆ ಆಗಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಬೆಂಗಳೂರಿನ ಇನ್ಸೈಟ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.
ನಗರದ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದ ಆಶ್ರಯದಲ್ಲಿ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಗುರುವಾರ ವಿಶೇಷ ಚೇತನರಿಗೆ ವ್ಹೀಲ್ ಚೇರ್, ವಾಕರ್, ಶ್ರವಣ ಸಾದನ ವಿತರಿಸಿ ಮಾತನಾಡಿ, ಈಗಿನ ಶಿಕ್ಷಣ ವ್ಯವಸ್ಥೆಯು ಎಲ್ಲರನ್ನೂ ದಡ್ಡರನ್ನಾಗಿ ಮಾಡುತ್ತಿದ್ದು, ಹೊಸ ಆಲೋಚನೆ ತರುವಂತಹ ಶಿಕ್ಷಣದ ಅಗತ್ಯವಿದೆ ಎಂದರು. ಜನರಿಂದ ಆಯ್ಕೆಯಾಗುವ ರಾಜಕಾರಣಿಗಳು, ನಾಗರಿಕ ಸೇವೆಯಲ್ಲಿ ತೊಡಗಿದ ಅಧಿಕಾರಿಗಳೇ ಇಂದು ರಾಜರಾಗಿದ್ದಾರೆ. ಜನ ಪ್ರತಿನಿಧಿಗಳ ಆಯ್ಕೆ ಮಾಡುವ ಜನ ಸಾಮಾನ್ಯ ರಾಜನಂತೆ ಇರಬೇಕು. ಅದು ನಿಜವಾದ ಪ್ರಜಾಪ್ರಭುತ್ವ. ಆದರೆ, ರಾಜಕಾರಣಿಗಳು, ಅಧಿಕಾರಿಗಳು ಸೇರಿಕೊಂಡು ಜನರನ್ನೇ ಸೇವಕರನ್ನಾಗಿ ಮಾಡುತ್ತಾ ಬಂದಿದ್ದಾರೆ. ಇಂತಹ ಧೋರಣೆ ಮೊದಲು ಬದಲಾಗಬೇಕಿದೆ ಎಂದು ಹೇಳಿದರು.ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಜನರನ್ನು ಪ್ರೀತಿಸುವ ರಾಜಕಾರಣಿಗಳ ಅಗತ್ಯತೆ ಇಂದು ಹೆಚ್ಚಾಗಿದೆ. ಇವುಗಳಿದ್ದಲ್ಲಿ ಜನರ ಕಷ್ಟಕ್ಕೆ ನೆರವಿನ ಹಸ್ತ ಚಾಚುವಂತಹ ಮನೋಭಾವವು ಸಹಜವಾಗಿಯೇ ಮೈಗೂಡುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಡ್ಡ ಮಾರ್ಗ, ವಾಮಮಾರ್ಗದಿಂದ ದುಡಿಯದೇ, ಶಿಕ್ಷಣ ಕ್ಷೇತ್ರದಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ನೀಡುತ್ತಾ ಬಂದು, ನನ್ನ ದುಡಿಮೆಯಲ್ಲಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿವರಿಸಿದರು.
ರಾಜಕಾರಣವನ್ನು ಮಾಡಿಕೊಂಡು, ಅದರಿಂದಲೇ ಬೆಳೆದು ದೊಡ್ಡ ಅಧಿಕಾರ ಹಿಡಿಯಲು ಮುಂದಾಗುವ ರಾಜಕಾರಣಿಗಳು ಜನರ ವಂಚಿಸುವ ಮೂಲಕ ಅಧಿಕಾರ, ಸಂಪತ್ತು, ಅವಕಾಶಗಳನ್ನು ತಮಗೆ, ತಮ್ಮ ಕುಟುಂಬಕ್ಕೆ, ತಮ್ಮವರಿಗಾಗಿ ಮಾತ್ರ ಇರಬೇಕೆಂಬ ಮನೋಭಾವ ಮೈಗೂಡಿಸಿಕೊಳ್ಳುತ್ತಾರೆ. ಮೊದಲು ಇಂತಹ ಸ್ವಾರ್ಥ ರಾಜಕಾರಣ ತೊಲಗಬೇಕಾದ ಅಗತ್ಯವಿದೆ. ಜಿ.ಬಿ.ವಿನಯಕುಮಾರ, ಇನ್ಸೈಟ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕ