ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರ

KannadaprabhaNewsNetwork | Published : Apr 19, 2025 12:31 AM

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಆದ್ದರಿಂದ ಸಮಾಜದಲ್ಲಿನ ಯುವಜನರು ಉನ್ನತ ಶಿಕ್ಷಣದಿಂದ ವಿಮುಖರಾಗಬಾರದು. ಸಮುದಾಯದ ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಅವುಗಳಿಂದ ದೂರವಿರಬೇಕು ಎಂದು ಜಗಳೂರು ಕ್ಷೇತ್ರ ಶಾಸಕ ದೇವೇಂದ್ರಪ್ಪ ಹೇಳಿದ್ದಾರೆ.

- ವಾಲ್ಮೀಕಿ ಯುವಕರಿಗೆ ನಾಯಕತ್ವ-ಕೌಶಲ್ಯ ಶಿಬಿರದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಆದ್ದರಿಂದ ಸಮಾಜದಲ್ಲಿನ ಯುವಜನರು ಉನ್ನತ ಶಿಕ್ಷಣದಿಂದ ವಿಮುಖರಾಗಬಾರದು. ಸಮುದಾಯದ ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಅವುಗಳಿಂದ ದೂರವಿರಬೇಕು ಎಂದು ಜಗಳೂರು ಕ್ಷೇತ್ರ ಶಾಸಕ ದೇವೇಂದ್ರಪ್ಪ ಹೇಳಿದರು.

ನಗರದ ಹೊರವಲಯದ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ವತಿಯಿಂದ ಶುಕ್ರವಾರದಿಂದ 2 ದಿನಗಳ ಕಾಲ ನಡೆದ, ವಾಲ್ಮೀಕಿ ಸಮುದಾಯದ ಯುವಕರಿಗೆ ನಾಯಕತ್ವ ಮತ್ತು ಕೌಶಲ್ಯ ಶಿಬಿರವನ್ನು ಅಂಬೇಡ್ಕರ್ ಹಾಗೂ ವಾಲ್ಮೀಕಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂಕುಶ ಪ್ರಭುತ್ವ ವ್ಯವಸ್ಥೆಯಲ್ಲಿ ಕತ್ತಿ ಹಿಡಿದು ಹೋರಾಡುತ್ತಿದ್ದರು ಎಂಬುದು ನಾವು ಓದಿದ್ದೇವೆ. ಆದರೆ ಪ್ರಜಾಪ್ರಭುತ್ವದ ಆಡಳಿತದಲ್ಲಿ ಖಡ್ಗಕಿಂತ ಲೇಖನಿಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.

ಭವಿಷ್ಯದ ಬದುಕಿನಲ್ಲಿ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರೂ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ, ತಂದೆ- ತಾಯಿ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ಗಮನಹರಿಸಬೇಕು. ಒಬ್ಬ ಉತ್ತಮ ನಾಯಕ ಆಗಬೇಕಾದರೆ ಎಲ್ಲ ವರ್ಗಗಳ ವಿಶ್ವಾಸ ಗಳಿಸಬೇಕು ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ನಮ್ಮ ವೇದಿಕೆ ವತಿಯಿಂದ ಜಾತ್ಯತೀತವಾಗಿ ಎಲ್ಲ ಸಮುದಾಯದ ಜಾಗೃತಿಗಾಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಸಮುದಾಯದ ಯುವಕರು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿಯವರು ಈ ರಾಜ್ಯದ ಮುಖ್ಯಮಂತ್ರಿ ಆಗುವ ಸಂಭವವಿದೆ. ಎಲ್ಲ ವರ್ಗದ ಶೋಷಿತ ಜನರಿಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದರು.

ಮುಖಂಡ ಬಿ.ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಡಾ. ಮುತ್ತಯ್ಯ ಹಾಗೂ ಡಾ. ಪ್ರಶಾಂತ ನಾಯಕ್ ಶಿಬಿರದಲ್ಲಿ ತರಬೇತಿ ನೀಡಿದರು. ಮುಖ್ಯಮಂತ್ರಿ ಪದಕ ಪುರಸ್ಕೃತ ಹರಿಹರ ಗ್ರಾಮಾಂತರ ಪಿಎಸ್‌ಐ ಮಂಜುನಾಥ್ ಕುಪೆಲೂರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎನ್. ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಮಾರಣ್ಣ ನಾಯಕ, ಜಿಗಳಿ ಆನಂದಪ್ಪ, ಮಾಡಾಳ್ ಶಿವಕುಮಾರ್, ಪ್ರಕಾಶ ಹಾದಿಮನೆ, ಜಿಗಳಿ ಪ್ರಕಾಶ್ ಹಾಗೂ ಇತರರಿದ್ದರು.

- - -

-18ಎಚ್‍ಆರ್‍ಆರ್1:

ಹರಿಹರದ ಹೊರವಲಯದ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಶುಕ್ರವಾರ ವಾಲ್ಮಿಕಿ ಸಮುದಾಯದ ಯುವಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಶಾಸಕ ದೇವೇದ್ರಪ್ಪ ಉದ್ಘಾಟಿಸಿದರು. ಎ.ಬಿ.ರಾಮಚಂದ್ರಪ್ಪ, ಬಿ.ವೀರಣ್ಣ, ಹೊದಿಗೆರೆ ರಮೇಶ್ ಇತರರಿದ್ದರು.

Share this article