ಗ್ರಾಹಕರ ಸೋಗಿನಲ್ಲಿ ೪.೮೦ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕದ್ದ ಮಹಿಳೆ!

KannadaprabhaNewsNetwork | Published : Apr 19, 2025 12:31 AM

ಸಾರಾಂಶ

ಹಳೆ ಬಸ್ ನಿಲ್ದಾಣದ ಬಳಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಬುರ್ಕಾಧಾರಿ ಮಹಿಳೆ ಒಟ್ಟು ೭೨ ಗ್ರಾಮ್ ತೂಕದ ೪.೮೦ ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ ಘಟನೆ ಬಗ್ಗೆ ಶುಕ್ರವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಉಪ್ಪಿನಂಗಡಿ : ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಬುರ್ಕಾಧಾರಿ ಮಹಿಳೆ ಒಟ್ಟು ೭೨ ಗ್ರಾಮ್ ತೂಕದ ೪.೮೦ ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ ಘಟನೆ ಬಗ್ಗೆ ಶುಕ್ರವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಇಲ್ಲಿನ ಹಸನ್ ಟವರ್ಸ್ ಎಂಬಲ್ಲಿರುವ ದಿನಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಎಂಬ ಚಿನ್ನಾಭರಣ ಅಂಗಡಿಗೆ ಗುರುವಾರ ಮಧ್ಯಾಹ್ನ ೨.೩೦ ಗ್ರಾಹಕರ ಸೋಗಿನಲ್ಲಿ ಬಂದ ಬುರ್ಕಾಧಾರಿ ಮಹಿಳೆ ಮದುವೆ ಕಾರ್ಯಕ್ರಮಕ್ಕೆ ೩೦ ಗ್ರಾಮ್ ಚಿನಾಭರಣ ಬೇಕಾಗಿದೆ. ನನ್ನ ಮನೆಯವರು ನಾಳೆ ಬಂದು ಹಣಕೊಟ್ಟು ಚಿನ್ನಾಭರಣವನ್ನು ತೆಗೆದುಕೊಳ್ಳುತ್ತಾರೆ. ನಾನೀಗ ಚಿನ್ನಾಭರಣವನ್ನು ಸೆಲೆಕ್ಟ್ ಮಾಡಿ ಹೋಗುತ್ತೇನೆ ಎಂದು ತಿಳಿಸಿದ್ದು, ಅಲ್ಲಿನ ಸಿಬ್ಬಂದಿ ಬೇರೆ ಬೇರೆ ನಮೂನೆಯ ಚಿನ್ನಾಭರಣ ಟ್ರೇಯಲ್ಲಿಟ್ಟು ತೋರಿಸಿದ್ದಾರೆ. ಅದರಲ್ಲಿನ ಕೆಲವೊಂದು ಆಭರಣ ಗುರುತಿಸಿ, ನಾಳೆ ದಿನ ನನ್ನ ಮನೆಯವರು ಬಂದು ಹಣಕೊಟ್ಟು ಈ ಎಲ್ಲಾ ಆಭರಣವನ್ನು ಖರೀದಿಸುತ್ತಾರೆ ಎಂದು ತಿಳಿಸಿ ಹೋಗಿರುತ್ತಾರೆ.

ರಾತ್ರಿ ಸ್ಟಾಕ್ ಚೆಕ್ ಮಾಡುವ ವೇಳೆ ಆಭರಣದ ಕೊರತೆ ಕಂಡು ಬಂದಿದ್ದು, ಪರಿಶೀಲನೆಯ ವೇಳೆ ೨೪ ಗ್ರಾಮ್ ತೂಕದ ಚಿನ್ನದ ಕಾಲ್ ಚೈನ್ ೨ ಜೊತೆ, ೮ ಗ್ರಾಮ್ ತೂಕದ ಚಿನ್ನದ ಬ್ರಾಸ್ ಲೈಟ್ ಒಂದು, ೧೬ ಗ್ರಾಮ್ ತೂಕದ ಚಿನ್ನದ ಸರ ಒಂದು ಹೀಗೆ ಒಟ್ಟು ೭೨ ಗ್ರಾಮ್ ತೂಕದ ಚಿನ್ನಾಭರಣವನ್ನು ಗ್ರಾಹಕರ ಸೋಗಿನಲ್ಲಿ ಬಂದ ಬುರ್ಕಾಧಾರಿ ಮಹಿಳೆ ಎಗರಿಸಿರುವುದು ಕಂಡು ಬಂದಿತ್ತು. ಎಗರಿಸಲ್ಪಟ್ಟ ಚಿನಾಭರಣದ ಮೌಲ್ಯ ೪.೮೦ ಲಕ್ಷ ಎಂದು ತಿಳಿಸಲಾಗಿದೆ.

ಮಾಲಕ ಇರ್ಷಾದ್ ಪಿ ಎಸ್ ಪೊಲೀಸರಿಗೆ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Share this article