ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚಳ ಎಫೆಕ್ಟ್‌ಗೋವಾ ಗಡಿಯತ್ತ ಕಾರವಾರ ವಾಹನಗಳು

KannadaprabhaNewsNetwork |  
Published : Jun 19, 2024, 01:16 AM IST
ಕಾರವಾರದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. | Kannada Prabha

ಸಾರಾಂಶ

ಕಾರವಾರದಿಂದ ಕೇವಲ 15 ಕಿಮೀ ದೂರದಲ್ಲಿ ಗೋವಾದ ಪೋಳೆಂ ಎಂಬಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಿವೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ₹94 ಮಾತ್ರ. ಅದೇ ಕಾರವಾರದಲ್ಲಿ ₹104.70 ಆಗಿದೆ.

ಕಾರವಾರ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ ಕಾರವಾರಕ್ಕಿಂತ ಸಮೀಪದ ಗೋವಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹9 ಕಡಿಮೆ ಆಗುವುದರಿಂದ ಗೋವಾ ಗಡಿ ಪೋಳೆಂ ಪೆಟ್ರೋಲ್ ಬಂಕ್‌ನಲ್ಲಿ ಜನಸಂದಣಿ ಇದ್ದರೆ, ಕಾರವಾರದ ಪೆಟ್ರೋಲ್ ಬಂಕ್‌ಗಳಿಗೆ ಗ್ರಾಹಕರು ಕಡಿಮೆಯಾಗಿದ್ದಾರೆ.

ಕಾರವಾರದಿಂದ ಕೇವಲ 15 ಕಿಮೀ ದೂರದಲ್ಲಿ ಗೋವಾದ ಪೋಳೆಂ ಎಂಬಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಿವೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ₹94 ಮಾತ್ರ. ಅದೇ ಕಾರವಾರದಲ್ಲಿ ₹104.70 ಆಗಿದೆ. ಲೀಟರ್‌ಗೆ ₹9 ಕಡಿಮೆ ಇರುವುದರಿಂದ ಗೋವಾಕ್ಕೆ ಹೋಗಿ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಪೆಟ್ರೋಲ್‌ಗೆ ಲೀಟರಿಗೆ ಕೇವಲ ₹6 ಕಡಿಮೆ ಆಗುತ್ತಿತ್ತು. ಇತ್ತೀಚೆಗೆ ರಾಜ್ಯದಲ್ಲಿ ₹3 ಹೆಚ್ಚಳ ಮಾಡಿರುವುದರಿಂದ ₹9 ಕಡಿಮೆಯಾಗಿದೆ.

ಹೇಳಿಕೇಳಿ ಗೋವಾ ಮದ್ಯಪ್ರಿಯರಿಗೆ ಸ್ವರ್ಗ. ಈಗ ಮದ್ಯ ಸೇವನೆಯ ಜತೆಗೆ ಪೆಟ್ರೋಲ್ ಕೂಡ ಗಾಡಿಗೆ ಭರ್ತಿ ಮಾಡಿಕೊಂಡು ಬರುತ್ತಿದ್ದಾರೆ.

ಡೀಸೆಲ್ ಕೂಡ ರಾಜ್ಯಕ್ಕೆ ಹೋಲಿಸಿದರೆ ಗೋವಾದಲ್ಲಿ ಲೀಟರಿಗೆ ಸುಮಾರು ₹5 ಕಡಿಮೆ ಆಗಿದೆ. ಗೋವಾಕ್ಕೆ ಪ್ರಯಾಣ ಬೆಳೆಸಿದವರು ಅಥವಾ ಗೋವಾ ಗಡಿಯಲ್ಲಿ ಇರುವವರು ತಮ್ಮ ವಾಹನಗಳಿಗೆ ಡೀಸೆಲ್ ಕೂಡ ಗೋವಾದಲ್ಲೇ ಹಾಕಿಸುತ್ತಿದ್ದಾರೆ.

5 ವರ್ಷಗಳಿಗೂ ಮುನ್ನ ಗೋವಾದಲ್ಲಿ ಪೆಟ್ರೋಲ್ ಬೆಲೆ ಕರ್ನಾಟಕಕ್ಕಿಂತ ಪ್ರತಿ ಲೀಟರ್ ಗೆ ಸುಮಾರು ₹15 ಕಡಿಮೆ ಇತ್ತು. ಆಗ ಕಾರವಾರದ ಪೆಟ್ರೋಲ್ ಬಂಕ್‌ಗಳು ಭಣಭಣಗುಡುತ್ತಿದ್ದವು. ನಂತರ ಗೋವಾದಲ್ಲಿ ತೆರಿಗೆ ಹೆಚ್ಚಳ ಮಾಡಿದ್ದರಿಂದ ರಾಜ್ಯಕ್ಕಿಂತ ₹5- 6 ಗಳಷ್ಟೇ ಕಡಿಮೆ ಆಗುವಂತಾಯಿತು. ಇದರಿಂದ ಪೆಟ್ರೋಲ್ ಹಾಕಿಸಲೆಂದೆ ಗೋವಾಕ್ಕೆ ಹೋಗುವವರ ಪ್ರಮಾಣ ಇಳಿಮುಖವಾಗಿ ಕಾರವಾರದ ಪೆಟ್ರೋಲ್ ಬಂಕ್‌ಗಳಲ್ಲಿ ಜನಸಂದಣಿ ಹೆಚ್ಚಿತು. ಈಗ ಮತ್ತೆ ಕರ್ನಾಟಕದಲ್ಲಿ ಪೆಟ್ರೋಲ್ ತೆರಿಗೆ ಹೆಚ್ಚಿಸಿದ್ದರಿಂದ ಲೀಟರ್‌ಗೆ ₹9 ಕಡಿಮೆಯಾಗಿದ್ದು, ಕಾರವಾರಿಗರು ಪೆಟ್ರೋಲ್‌ಗಾಗಿ ಗೋವಾದತ್ತ ಮುಖ ಮಾಡುತ್ತಿದ್ದಾರೆ. ಹಾಗೆ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಮಾಡಿರುವುದರಕ್ಕೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!