ಗಿರೀಶ್ ಮಾದೇನಹಳ್ಳಿ ಕನ್ನಡಪ್ರಭ ವಾರ್ತೆ ಬೆಂಗಳೂರು ತನ್ನ ಹೆಸರು, ವಿಳಾಸ, ಕೆಲಸ ಮಾಡುವ ಜಾಗ, ಮೊಬೈಲ್ ಸಂಖ್ಯೆ ಹೀಗೆ ಪೋಟೋ ಸಹಿತ ರೇಣುಕಾಸ್ವಾಮಿ ತನ್ನ ವೈಯಕ್ತಿಕ ವಿವರ ಕಳುಹಿಸುವ ಮೂಲಕ ನಟ ದರ್ಶನ್ ಗ್ಯಾಂಗ್ ಬಲೆಗೆ ತಾನಾಗಿಯೇ ಬಿದ್ದು ಪ್ರಾಣಕ್ಕೆ ಎರವು ಮಾಡಿಕೊಂಡ ಕುತೂಹಲಕಾರಿ ವಿಷಯ ಬಯಲಾಗಿದೆ.ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಇನ್ಸ್ಟಾಗ್ರಾಂನಲ್ಲಿ ‘ಸಲುಗೆಯ’ ಚಾಟಿಂಗ್ ಮೂಲಕ ತನ್ನ ಗಾಳಕ್ಕೆ ಸೆಳೆದ ಪವಿತ್ರಾಗೌಡ, ಆತನಿಂದಲೇ ಸ್ವವಿವರ ಸಂಗ್ರಹಿಸಿ ದರ್ಶನ್ಗೆ ತಿಳಿಸಿದ್ದಳು. ಈ ವಿವರವನ್ನು ದರ್ಶನ್, ಚಿತ್ರದುರ್ಗ ಜಿಲ್ಲೆಯ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಕಳುಹಿಸಿ ರೇಣುಕಾಸ್ವಾಮಿಯನ್ನು ಕೂಡಲೇ ಬೆಂಗಳೂರಿಗೆ ಕರೆತರುವಂತೆ ಹುಕುಂ ನೀಡಿದ್ದರು. ಅಂತೆಯೇ ರೇಣುಕಾಸ್ವಾಮಿಯನ್ನು ಜೂ.8ರಂದು ಚಿತ್ರದುರ್ಗದಲ್ಲಿ ಅಪಹರಿಸಿ ಕರೆತಂದು ದರ್ಶನ್ಗೆ ರಾಘವೇಂದ್ರ ತಂಡ ಒಪ್ಪಿಸಿತ್ತು ಎಂದು ‘ಕನ್ನಡಪ್ರಭ’ಕ್ಕೆ ಉನ್ನತ ಮೂಲಗಳು ತಿಳಿಸಿವೆ.ನಕಲಿ ಖಾತೆಗಳ ಶೂರ:
ಈ ಮಾಹಿತಿ ತಿಳಿದ ಕೂಡಲೇ ದರ್ಶನ್, ಆ ಜಿಲ್ಲೆಯ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಪೋಟೋ ಕಳುಹಿಸಿ ಹುಡುಕುವಂತೆ ಸೂಚಿಸಿದ್ದರು. ಕೊನೆಗೆ ಅಪೋಲೋ ಫಾರ್ಮಸಿಗೆ ತೆರಳಿ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಗುರುತಿಸಿದ ರಾಘವೇಂದ್ರ, ಆತ ಗೌತಮ್ ಅಲ್ಲ ನಿಜವಾದ ಹೆಸರು ರೇಣುಕಾಸ್ವಾಮಿ ಎಂದು ದರ್ಶನ್ ರವರಿಗೆ ತಿಳಿಸಿದ್ದ. ಆಗ ಕೂಡಲೇ ಆತನನ್ನು ಬೆಂಗಳೂರಿಗೆ ಕರೆತರುವಂತೆ ದರ್ಶನ್ ಸೂಚಿಸಿದ್ದರು.
ಅಂತೆಯೇ ಜೂ.8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿ ಮೊಬೈಲ್ಗೆ ಕರೆ ಮಾಡಿದ ರಾಘವೇಂದ್ರ, ನಿನ್ನೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಕರೆಸಿಕೊಂಡಿದ್ದ. ನಿನ್ನನ್ನು ದರ್ಶನ್ ಭೇಟಿಯಾಗಬೇಕಂತೆ. ಈಗಲೇ ಹೋಗಬೇಕು ಎಂದು ತಿಳಿಸಿ ಕಾರಿನಲ್ಲಿ ಬಲವಂತವಾಗಿ ಕರೆತಂದು ದರ್ಶನ್ಗೆ ರಾಘವೇಂದ್ರ ತಂಡ ಒಪ್ಪಿಸಿತ್ತು ಎಂದು ತಿಳಿದು ಬಂದಿದೆ.ಪವಿತ್ರಾಗೆ ಗೌತಮ್ ಹೆಸರಿನ ನಕಲಿ ಖಾತೆಯಲ್ಲಿ ಅಶ್ಲೀಲ ಫೋಟೋ ರವಾನಿಸಿದ್ದ ರೇಣುಕಾಸ್ವಾಮಿ, ಇದರಿಂದ ಕೆರಳಿ ಸಹಾಯಕ ಪವನ್ ಬಳಿ ಪವಿತ್ರಾ ಗೌಡ ದೂರಿದ್ದ ವಿಷಯ ತಿಳಿದು ದರ್ಶನ್ ಕಿಡಿ ಕಾರಿದ್ದರು. ಸಲುಗೆಯಿಂದ ಚಾಟ್ ಮಾಡಿದಾಗ ಪೂರ್ಣ ಸ್ವವಿವರ ನೀಡಿ ಸಿಕ್ಕಿಬಿದ್ದಿದ್ದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದೆ.