ಗ್ರಾಮ ಸಂಚಾರ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಹಾನಗಲ್ಲವ್ಯವಸ್ಥೆಯ ಸುಧಾರಣೆಗೆ ಲಕ್ಷ್ಯವಿಟ್ಟು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಾರ್ವಜನಿಕ ಸಮಸ್ಯೆಗಳಿಗೆ ಮುಕ್ತಿ ದೊರಕಿಸಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ವರ್ದಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಗ್ರಾಮ ಸಂಚಾರ ಕೈಗೊಂಡು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದ ಅವರು, ವಾರದಲ್ಲಿ ಎರಡು, ಮೂರು ದಿನ ತಾಲೂಕಿನಲ್ಲಿ ಓಡಾಡಿ ಸಾಧ್ಯವಾದಷ್ಟು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ೨೦೨೧ ರಲ್ಲಿ ನಡೆದ ಉಪ ಚುನಾವಣೆಯ ನಂತರ ತಾಲೂಕಿನ ಪ್ರತಿ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಶಾಸನ ಮಂಜೂರಿ ಪ್ರಕರಣಗಳ ವಿಲೇವಾರಿ ಚುರುಕುಗೊಳಿಸಲಾಗಿತ್ತು. ಅದರ ಪರಿಣಾಮವೀಗ ತಾಲೂಕಿನಲ್ಲಿ ಕೆಲವೇ ಗಂಟೆಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರಿ ಮಾಡಲಾಗುತ್ತಿದೆ. ಮಂಜೂರಿ ಪ್ರಕರಣಗಳು ಬಹುತೇಕ ಯಾವವೂ ಸಹ ಬಾಕಿ ಉಳಿಯುತ್ತಿಲ್ಲ. ಈಗ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಶಾಸನ ಮಂಜೂರಿಗೆ ಫಲಾನುಭವಿಗಳು ಮನವಿ ಸಲ್ಲಿಸುತ್ತಿಲ್ಲ ಎಂದು ಹೇಳಿದ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಜನಸಂಪರ್ಕದ ಸಮಯ ನಿಗದಿ ಪಡಿಸಲಾಗಿದೆ. ಹೀಗಾಗಿ ಜನರ ಸಮಸ್ಯೆಗಳು ಸ್ಥಳೀಯ ಅಧಿಕಾರಿಗಳ ಹಂತದಲ್ಲಿ ಪರಿಹಾರ ಕಾಣುತ್ತಿವೆ ಎಂದರು.ಗ್ರಾಪಂ ಸದಸ್ಯರಾದ ಈರಪ್ಪ ಬೂದಿಹಾಳ, ಹಜರತ್ಅಲಿ ಎತ್ತಿನಮನಿ, ಮುಖಂಡರಾದ ಸುಲೇಮಾನ ಮುಲ್ಲಾ, ಮಹಾಬಳೇಶ್ವರ ಸಣ್ಣಪ್ಪನವರ, ಫಕ್ಕೀರಪ್ಪ ಹರಿಜನ, ಶೇಕಪ್ಪ ಹರಿಜನ, ಸುರೇಶ ಮರಲಿಂಗಣ್ಣನವರ, ಜಿಲಾನಿಸಾಬ್, ಕಲವೀರಪ್ಪ ಹಲಸೂರ, ಪ್ರಕಾಶ ಕಾಡಪ್ಪನವರ, ಶಂಭು ಬಾಳಿಕಾಯಿ, ಮಹಾಬಳೇಶ್ವರ ಸವಣೂರ, ಮಾರುತಿ ಕನವಳ್ಳಿ, ಸುರೇಶ ಮಾಚಾಪೂರ, ಹಸನಮಿಯಾ ತಂಡೂರ, ರಾಮಣ್ಣ ತಂಬೂಳಿ, ಅಬ್ದುಲ್ರಜಾಕ್ ನರೇಗಲ್ ಈ ಸಂದರ್ಭದಲ್ಲಿದ್ದರು.