ಸಚಿವ ಸ್ಥಾನ ವಂಚಿತರ ಬೆಂಬಲಿಗರು ರಸ್ತೆಗಳಿದು ಪ್ರತಿಭಟನೆ ನಡೆಸುವುದು ಕಡಿಮೆಯಾಗಿದ್ದರೂ, ಅವಕಾಶ ವಂಚಿತರ ಬಂಡಾಯದ ಒಳ ಬೇಗುದಿ ಮುಂದುವರಿದಿದೆ. ಹೀಗಾಗಿ ಬೂದಿ ಮುಚ್ಚಿದ ಕೆಂಡದಿಂದ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಬೆಂಗಳೂರು : ಸಚಿವ ಸ್ಥಾನ ವಂಚಿತರ ಬೆಂಬಲಿಗರು ರಸ್ತೆಗಳಿದು ಪ್ರತಿಭಟನೆ ನಡೆಸುವುದು ಕಡಿಮೆಯಾಗಿದ್ದರೂ, ಅವಕಾಶ ವಂಚಿತರ ಬಂಡಾಯದ ಒಳ ಬೇಗುದಿ ಮುಂದುವರಿದಿದೆ. ಹೀಗಾಗಿ ಬೂದಿ ಮುಚ್ಚಿದ ಕೆಂಡದಿಂದ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮನವೊಲಿಕೆ ಯತ್ನದ ಬಳಿಕವೂ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ.

ಇದರ ಹಿನ್ನೆಲೆಯಲ್ಲಿ ಖುದ್ದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರೇ ಎಂ.ಕೃಷ್ಣಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೂ ಪಟ್ಟು ಸಡಿಲಿಸದ ಕೃಷ್ಣಪ್ಪ, ಸಚಿವ ಸ್ಥಾನದ ಹೊರತಾಗಿ ಬೇರೆ ಯಾವುದೇ ಆಯ್ಕೆಯನ್ನೂ ಸ್ವೀಕರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಸುರ್ಜೇವಾಲಾ ಅವರು ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಎಚ್.ಕೆ. ಪಾಟೀಲ್‌ ಅವರನ್ನು ಭೇಟಿ ಮಾಡಿ ಮನವೊಲಿಕೆ ಯತ್ನಿಸಿದರು. ಆದರೂ ಎಂ.ಕೃಷ್ಣಪ್ಪ ಅವರು ಸಮಾಧಾನಗೊಂಡಿಲ್ಲ.

ಎಚ್.ಕೆ.ಪಾಟೀಲ್ ಪಟ್ಟು:

ಎಚ್.ಕೆ. ಪಾಟೀಲ್‌ ಅವರು ಸಹ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಕಸರತ್ತು ಮುಂದುವರೆಸಿದ್ದಾರೆ. ಸುರ್ಜೇವಾಲಾ ಭೇಟಿ ಬಳಿಕವೂ ಗುರುವಾರ ಅಸಮಾಧಾನಿತ ಶಾಸಕರಾದ ದಿನೇಶ್ ಗುಂಡೂರಾವ್‌ ಜತೆ ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ಮುಂದುವರೆದ ಲಾಬಿ:

ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಎಚ್.ಸಿ. ಮಹದೇವಪ್ಪ ಅವರು ದೆಹಲಿಗೆ ತೆರಳಿದ್ದು, ಕೃಷ್ಣಪ್ಪ ಪುತ್ರ ಪ್ರಿಯಕೃಷ್ಣ ಸಹ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಇನ್ನು ಎಸ್‌.ಎನ್‌. ನಾರಾಯಣಸ್ವಾಮಿ, ಬಿ.ಆರ್‌.ಪಾಟೀಲ್‌, ಟಿ.ಬಿ. ಜಯಚಂದ್ರ, ಅಶೋಕ್‌ ಪಟ್ಟಣ್‌, ಯಶವಂತರಾಯಗೌಡ ಪಾಟೀಲ, ಸುಬ್ಬಾರೆಡ್ಡಿ ಅವರು ತಮ್ಮ ಅಸಮಾಧಾನದ ಹೇಳಿಕೆಗಳನ್ನು ಮುಂದುವರೆಸಿದ್ದಾರೆ.