ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಳಿತ : ಶಾಲೆಗಳಲ್ಲಿ ವಿತರಣಾ ವ್ಯವಸ್ಥೆಗೆ ಸಮಸ್ಯೆ

KannadaprabhaNewsNetwork |  
Published : Jul 26, 2025, 01:30 AM ISTUpdated : Jul 26, 2025, 11:49 AM IST
ಪೋಟೋ ಇದೆ. | Kannada Prabha

ಸಾರಾಂಶ

ಗದಗ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ಏರಿಳಿತವಾಗುತ್ತಿದ್ದು, ಇದು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣಾ ವ್ಯವಸ್ಥೆಗೆ ಸಮಸ್ಯೆ ತಂದೊಡ್ಡಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ಏರಿಳಿತವಾಗುತ್ತಿದ್ದು, ಇದು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣಾ ವ್ಯವಸ್ಥೆಗೆ ಸಮಸ್ಯೆ ತಂದೊಡ್ಡಿದೆ.

ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರೈಸುವ ಒಂದು ಮೊಟ್ಟೆಗೆ ₹6 ಗರಿಷ್ಠ ದರ ನಿಗದಿ ಮಾಡಿದೆ. ಚಳಿಗಾಲ ಸಂದರ್ಭದಲ್ಲಿ ₹6ರಿಂದ ₹6.30 ವರೆಗೆ ಮೊಟ್ಟೆ ಬೆಲೆ ಏರಿಕೆ ಆಗುತ್ತದೆ. ಸರ್ಕಾರದ ನಿಯಮ ಪ್ರಕಾರ ಬೆಲೆ ಇಳಿಕೆಯಾದಾಗ ಉಳಿಯುವ ಹಣವನ್ನು ಬೆಲೆ ಏರಿಕೆಯಾದಾಗ ಬಳಸಬೇಕು. ಆದರೆ ಇದು ಪಾಲನೆಯಾಗುತ್ತಿಲ್ಲ. ಮೊಟ್ಟೆ ಬೆಲೆ ಇಳಿದಾಗಲೂ ಸರ್ಕಾರ ₹6 ಪಾವತಿಸುತ್ತಿದೆ. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ಮೊಟ್ಟೆ ಬೆಲೆ ಏರಿಕೆ ಕಂಡಾಗ ಶಾಲಾ ಮಂಡಳಿಗಳಲ್ಲಿ ಮೊಟ್ಟೆ ದರ ಪಾವತಿಗೆ ಅನುದಾನ ಕೊರತೆ ಕಾಡುತ್ತಿದೆ. ಪ್ರತಿನಿತ್ಯ ಹತ್ತಾರು ಸಾವಿರ ರು. ಕೊರತೆಯಾಗುತ್ತಿದೆ.

1.27 ಲಕ್ಷ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1,27,619 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶೇ. 70ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಆಯ್ಕೆ ಮಾಡಿಕೊಂಡಿದ್ದಾರೆ. ಸರ್ಕಾರ ಒಂದು ಮೊಟ್ಟೆಗೆ ₹6 ಅನುದಾನ ಕೊಡುತ್ತದೆ. ಅದರಲ್ಲಿ ವಿಂಗಡಣೆ ಇದ್ದು, ಮೊಟ್ಟೆ ಖರೀದಿಗೆ ₹5, ಮೊಟ್ಟೆ ಬೇಯಿಸಲು 50 ಪೈಸೆ, ಮೊಟ್ಟೆ ಬಿಡಿಸಲು 30 ಪೈಸೆ ಹಾಗೂ ಸಾಗಾಣಿಕೆ ವೆಚ್ಚ 20 ಪೈಸೆ ಇರುತ್ತದೆ. ಪ್ರಸ್ತುತ ಮೊಟ್ಟೆ ದರ ಹೆಚ್ಚಾಗಿರುವುದರಿಂದ ಇದು ಸರಿದೂಗುತ್ತಿಲ್ಲ.

ಬೇಸಿಗೆಯಲ್ಲಿಯೂ ₹5 1 ಮೊಟ್ಟೆ ಸಿಗುತ್ತದೆ. ಜುಲೈ ತಿಂಗಳಿಗೆ ₹5.30, ಆಗಷ್ಟನಿಂದ ಅಕ್ಟೋಬರ್ ವರೆಗೆ ಸಗಟು ದರವೇ ₹6.30 ಆಗುತ್ತದೆ. ಮುಂದೆ ಡಿಸೆಂಬರ್, ಜನವರಿ ವರೆಗೂ ₹6 ಇರುತ್ತದೆ. ಈ ರೀತಿಯ ದರದಲ್ಲಿ ಆಗುತ್ತಿರುವ ಬದಲಾವಣೆ ಮೇಲ್ನೋಟಕ್ಕೆ ಸಣ್ಣದು ಎನ್ನಿಸಿದರೂ ಮಕ್ಕಳ ಸಂಖ್ಯೆ ಲಕ್ಷಗಟ್ಟಲೇ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ.

ತಾಲೂಕುವಾರು ವಿದ್ಯಾರ್ಥಿಗಳ ಮಾಹಿತಿ

ತಾಲೂಕು ವಿದ್ಯಾರ್ಥಿಗಳ ಸಂಖ್ಯೆ

ಗದಗ ಗ್ರಾಮೀಣ22934

ಗದಗ ನಗರ13813

ಮುಂಡರಗಿ19599

ನರಗುಂದ11417

ರೋಣ35327

ಶಿರಹಟ್ಟಿ24529

ಮೊಟ್ಟೆ ಸ್ವೀಕರಿಸುವವರ ಸಂಖ್ಯೆ:

ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಸಂಖ್ಯೆ 127529. ಅವರಲ್ಲಿ ಪ್ರತಿನಿತ್ಯ ಮೊಟ್ಟೆ ಸ್ವೀಕರಿಸುವ ಮಕ್ಕಳ ಸಂಖ್ಯೆ 101600.

ಮೊಟ್ಟೆ ದರ ಏರಿಳಿತದಿಂದ ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಇದೆ. ಆದರೆ, ಮೊಟ್ಟೆ ವಿತರಣೆ ಮಾತ್ರ ನಿಂತಿಲ್ಲ. ಆಯಾ ಸ್ಥಳೀಯ ಶಾಲಾ ಖರೀದಿ ಸಮಿತಿಗಳೇ ಮೊಟ್ಟೆ ಖರೀದಿಸುತ್ತಾರೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ ಕನವಳ್ಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''