ಪ್ರತಿ ಟನ್ ಕಬ್ಬಿಗೆ ₹3200 ನೀಡಲು ಒಪ್ಪಿದ ಈಐಡಿ ಕಾರ್ಖಾನೆ

KannadaprabhaNewsNetwork |  
Published : Nov 01, 2025, 02:45 AM IST
31ಎಚ್.ಎಲ್.ವೈ-(ಎ) ಸಭೆಯಲ್ಲಿ ಹಳಿಯಾಳ ಸೇರಿದಂತೆ ಅಕ್ಕಪಕ್ಕದ ತಾಲೂಕಿನ ರೈತ ಪ್ರಮುಖರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಅಂತೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ₹3200 ದರ ನೀಡಲು ಒಪ್ಪಿಗೆ ಸೂಚಿಸಿತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದೇ ತಿಂಗಳಲ್ಲಿ ಕಬ್ಬು ಬೆಳೆಗಾರರು-ಕಾರ್ಖಾನೆ ಪ್ರತಿನಿಧಿಗಳ 2ನೇ ಸಭೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಅಂತೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ₹3200 ದರ ನೀಡಲು ಒಪ್ಪಿಗೆ ಸೂಚಿಸಿತು. ಈ ಮೂಲಕ ಕಳೆದ ಒಂದು ತಿಂಗಳಿಂದ ಕಬ್ಬಿನ ದರದ ಕುರಿತು ಕಬ್ಬು ಬೆಳೆಗಾರರಲ್ಲಿ ಮೂಡಿದ ಆತಂಕ ದುಗುಡ ನಿವಾರಣೆಯಾದಂತಾಗಿದ್ದು, ಕಬ್ಬು ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.

ಶುಕ್ರವಾರ ಹಳಿಯಾಳ ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ ಹಾಗೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಹಲವು ಸುತ್ತಿನ ಮಾತುಕತೆ, ಮನವೊಲಿಕೆಯ ನಂತರ ಪ್ರಸಕ್ತ ಹಂಗಾಮಿಗೆ ಕಬ್ಬಿಗೆ ದರ ನಿಗದಿಪಡಿಸಲಾಯಿತು.

ಕಬ್ಬಿನ ದರ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ಬೇಡಿಕೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಸಭೆ ಇದಾಗಿದೆ. ಇದಕ್ಕೂ ಮೊದಲು ಅ. 8ರಂದು ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆದರು, ಮಾತುಕತೆ ಫಲಪ್ರದವಾಗದೇ ಸಭೆ ಅಪೂರ್ಣಗೊಂಡಿತ್ತು.

ಕಬ್ಬು ಬೆಳೆಗಾರರ ಎದುರಿಸುತ್ತಿರುವ ಸಮಸ್ಯೆ, ಆಗುತ್ತಿರುವ ಶೋಷಣೆಗಳ ಬಗ್ಗೆ ಸವಿಸ್ತಾರವಾಗಿ ಅಂಕಿ-ಅಂಶಗಳೊಂದಿಗೆ ವಿಷಯವನ್ನು ಕಬ್ಬು ಬೆಳೆಗಾರರ ಮುಖಂಡರಾದ ನಾಗೇಂದ್ರ ಜಿವೋಜಿ, ಕುಮಾರ ಬೊಬಾಟೆ, ಶಂಕರ ಕಾಜಗಾರ, ಧಾರವಾಡ ಜಿಲ್ಲಾ ಪ್ರಮುಖರಾದ ಮಹೇಶ ಬೆಳಗಾಂವಕರ, ಪರಶುರಾಮ ಯತ್ತಿನಗುಡ್ಡ ಸಭೆಯಲ್ಲಿ ಮಂಡಿಸಿ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

ಕಾರ್ಖಾನೆಯ ಪರವಾಗಿ ಮಾತನಾಡಿದ ಈಐಡಿ ಘಟಕ ಉಪಾಧ್ಯಕ್ಷ ಎಂ. ಬಾಲಾಜಿ, ರಮೇಶ ರೆಡ್ಡಿ ಹಾಗೂ ಶಂಕರಲಿಂಗ ಅಗಡಿ ಕಾರ್ಖಾನೆಯ ಧೋರಣೆ ಹಾಗೂ ನಿಲುವನ್ನು ಕಾರ್ಖಾನೆಗೆಯಾಗುವ ಲಾಭ ನಷ್ಟದ ಮಾಹಿತಿ ನೀಡಿ ರೈತರ ಹಿತರಕ್ಷಣೆಯ ನಮ್ಮ ಕಾರ್ಖಾನೆಯ ಮೂಲ ಆಶಯವಾಗಿದೆ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಕಬ್ಬು ಬೆಳೆಗಾರರ ಬೇಡಿಕೆ ನ್ಯಾಯೋಚಿತವಾಗಿದ್ದು, ದರನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಕಬ್ಬಿನ ದರ ನಿಗದಿ ಪಡಿಸುವ ವಿಷಯ ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ, ರೈತರಿಗೆ ಮೋಸ ಅನ್ಯಾಯವಾಗದಂತೆ, ನೋಡಿಕೊಳ್ಳುವ ಜವಾಬ್ದಾರಿ ತಮ್ಮದಾಗಿದೆ. ಈ ದಿಸೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನಿರ್ಣಯ ಕೈಗೊಳ್ಳಬೇಕು ಎಂದಾಗ, ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗಳೇ ನಿಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾರ್ಖಾನೆಯವರು ಪ್ರತಿ ಟನ ಕಬ್ಬಿಗೆ ₹3140 ನೀಡುವುದಾಗಿ ತಿಳಿಸಿದರು, ಕಾರ್ಖಾನೆಯ ದರದ ಬಗ್ಗೆ ಸಭೆಯಲ್ಲಿ ಬಾರಿ ಆಕ್ಷೇಪ ವ್ಯಕ್ತವಾಯಿತು. ಸಕ್ಕರೆ ಆಯುಕ್ತರು ಪ್ರಸಕ್ತ ಹಂಗಾಮಿಗೆ ಹೊರಡಿಸಿದ ಸುತ್ತೋಲೆಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿ ಪ್ರತಿ ಟನ್ ಕಬ್ಬಿಗೆ ₹3170 ದರ ನೀಡುವಂತೆ ಕಾಖಾನೆಯವರಿಗೆ ಸೂಚಿಸಿದರು. ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರೆಲ್ಲರೂ ಈ ದರಕ್ಕೆ ಅಸಮ್ಮತಿ ಸೂಚಿಸಿದರು. ಸಭೆ ಯಾವುದೇ ನಿರ್ಣಯಕ್ಕೆ ಬಾರದೇ ಮುಕ್ತಾಯಗೊಳ್ಳುವುದನ್ನು ಕಂಡು ಕಬ್ಬು ಬೆಳೆಗಾರರ ಪ್ರಮುಖರು ತಹಸೀಲ್ದಾರ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೆವೆ, ತದನಂತರ ದರ ನಿಗದಿಯಾಗಲಿ ಎಂದು ಮನವಿ ಮಾಡಿದರು.

ಈ ಹಿನ್ನೆಲೆ ಸಭಾಂಗಣದ ಬದಲು ತಹಸೀಲ್ದಾರ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಿತು. ಸಭೆಯಲ್ಲಿ ಕಬ್ಬು ಬೆಳೆಗಾರ ಹಾಗೂ ಕಾರ್ಖಾನೆಯ ಅಧಿಕಾರಿಗಳ ಮನವೊಲಿಸಲು ಜಿಲ್ಲಾಧಿಕಾರಿ ನಡಸಿದ ಪ್ರಯತ್ನ ಯಶಸ್ವಿಯಾಯಿತು. ಇದರ ಪರಿಣಾಮ ಪ್ರತಿ ಟನ್ ಕಬ್ಬಿಗೆ ₹3200 ದರವನ್ನು ನೀಡಲು ಕಾರ್ಖಾನೆಯವರು ಒಪ್ಪಿದರು. ಜಿಲ್ಲಾಧಿಕಾರಿ ಆದೇಶದಂತೆ ₹3200 ದರವನ್ನು ಘೋಷಿಸುತ್ತಿದ್ದು, ರೈತರು ಸಹ ನಮ್ಮ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ., ಅಪರ್ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ಪ್ರೋಬೆಷನರಿ ಐಎಎಸ್ ಅಧಿಕಾರಿ ಜುಪೀಷಾ ಹಕ್, ಧಾರವಾಡ ಜಿಲ್ಲಾ ಆಹಾರ ಇಲಾಖೆಯ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಉತ್ತರಕನ್ನಡ ಆಹಾರ ಇಲಾಖೆಯ ಅಧಿಕಾರಿ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹಾಗೂ ಹಳಿಯಾಳ, ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ರೈತರು ಉಪಸ್ಥಿತರಿದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!