ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದವರು ಅಂಡೇಛತ್ರಕ್ಕೆ ಬಂದು ಸೇರಿದರು. ಅಲ್ಲಿಂದ ಮೆರವಣಿಗೆ ಹೊರಟು ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ, ಪ್ರಧಾನ ಅಂಚೆ ಕಚೇರಿ ರಸ್ತೆಯ ಮೂಲಕ ತೆರಳಿ ಐ.ಜಿ. ರಸ್ತೆಗೆ ಬಂದು ಅಲ್ಲಿಂದ ಹನುಮಂತಪ್ಪ ವೃತ್ತ ಬಳಸಿ ಮತ್ತೆ ಅಂಡೇ ಛತ್ರದಲ್ಲಿ ಮೆರವಣಿಗೆಯನ್ನು ಅಂತ್ಯಗೊಳಿಸಿದರು.
ಈದ್ಮಿಲಾದ್ ಅಂಗವಾಗಿ ನಗರದ ಪ್ರಮುಖ ವೃತ್ತ ಮತ್ತು ಕೆಲವು ಬಡಾವಣೆಗಳನ್ನು ಹಸಿರು ಬಣ್ಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಮೊದಲು ಯುವಕರು ಬಿದಿರಿನಕೋಲು ಮತ್ತು ಪೈಪ್ಗಳಿಗೆ ಹಸಿರುಬಾವುಟಗಳನ್ನು ಕಟ್ಟಿಕೊಂಡು ಬೈಕ್ನಲ್ಲಿ ಸುತ್ತುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸ್ನೇಹಿತರು, ಆತ್ಮೀಯರು, ಸಂಬಂಧಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ಅಂಡೇಛತ್ರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಹೊರಡು ಸ್ಥಳದ ಮುಂಭಾಗದಲ್ಲಿ ಸ್ವಾಗತ ಕಮಾನುಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಹಸಿರು ಬಾವುಟಗಳನ್ನು ಕಟ್ಟಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಪ್ರವಾದಿ ಮಹ್ಮದ್ ಅವರ ಪರವಾಗಿ ಜಯಕಾರ ಕೂಗಿದರು.
ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ನಗರದಲ್ಲಿ ನಡೆದ ಬೃಹತ್ ಮೆರವಣಿಗೆ ಶಾಂತಿ ಯುತವಾಗಿ ಮುಕ್ತಾಯಗೊಂಡಿತು.
ತಿರಂಗಾ ಯಾತ್ರೆ ಮುಂದೂಡಿಕೆ
ತಿರಂಗಾ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯಾತ್ರೆ ಮುಂದೂಡಲಾಗಿದೆ. ಹಿಂದೂ ಸಂಘಟನೆಗಳ ಬೇಡಿಕೆಗಳನ್ನು ವಾರದೊಳಗೆ ಈಡೇರಿಸುವುದಾಗಿ ಪೊಲೀಸರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಾರದೊಳಗೆ ಬೇಡಿಕೆಗಳನ್ನು ಈಡೇರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ಅಗತ್ಯಬಿದ್ದರೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸುವುದಾಗಿಯೂ ತಿಳಿಸಿವೆ.
ಪೊಲೀಸರ ಸಂಧಾನ ಯಶಸ್ವಿ
ಈದ್ ಮಿಲಾದ್ ಮೆರವಣಿಗೆ ದಿನವೇ ತಿರಂಗಾ ಯಾತ್ರೆ ಹಮ್ಮಿಕೊಳ್ಳುವುದರಿಂದ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಂಗಳವಾರ ಸಂಜೆ ಮುಸ್ಲಿಂ ಮುಖಂಡರು ಹಾಗೂ ಹಿಂದೂ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ್ದರು. ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತಿರಂಗ ಯಾತ್ರೆ ಮುಂದೂಡಲಾಗಿದೆ. ಪೊಲೀಸ್ ಇಲಾಖೆಯ ಸಂಧಾನ ಯಶಸ್ವಿಯಾಗಿದೆ.
ಟಿಪ್ಪು ಕಟೌಟ್ ಬಳಿಯೇ ‘ಐ ಲವ್ ಮಹಮ್ಮದ್’ ಬ್ಯಾನರ್!ಟಿಪ್ಪು ಕಟೌಟ್ಗೆ ಪಾಕಿಸ್ತಾನಿ ಹಾಡು ಹಾಕಿರುವ ವಿಡಿಯೋ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಚಿಕ್ಕಮಗಳೂರು ನಗರದಲ್ಲಿ ಮತ್ತೊಂದು ವಿವಾದ ತಲೆದೋರಿದೆ.ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಟಿಪ್ಪು ನಗರದಲ್ಲಿ ‘ಐ ಲವ್ ಮಹಮ್ಮದ್’ ಎಂಬ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಹಿಂದೆ ಹಾಡಿನ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಕಟೌಟ್ ಬಳಿಯೇ ಬ್ಯಾನರ್ ಅಳವಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ಈದ್ ಮಿಲಾದ್ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಿಂದ ಆರಂಭವಾಗಿದ್ದ ‘ಐ ಲವ್ ಮಹಮ್ಮದ್’ ಬ್ಯಾನರ್ ವಿವಾದ ದೇಶದ ವಿವಿಧೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದೇ ರೀತಿಯ ಬ್ಯಾನರ್ ಚಿಕ್ಕಮಗಳೂರಿನಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ‘ಐ ಲವ್ ಮಹಮ್ಮದ್’ ಬ್ಯಾನರ್ ಅಳವಡಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.