ಅರಕಲಗೂಡಲ್ಲಿ ₹8.85 ಲಕ್ಷ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork |  
Published : Mar 01, 2024, 02:18 AM IST
29ಎಚ್ಎಸ್ಎನ್4 :  | Kannada Prabha

ಸಾರಾಂಶ

ಅರಕಲಗೂಡು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಪಂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ 2024-25 ನೇ ಸಾಲಿಗೆ 8.85 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ । 2024-25ನೇ ಸಾಲಿನ ಆಯವ್ಯಯ ಓದಿದ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಪಂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ 2024-25 ನೇ ಸಾಲಿಗೆ 8.85 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.

ಆರಂಭಿಕ ಮೊತ್ತ 7.76 ಲಕ್ಷ ರು.ಸೇರಿದಂತೆ 24.49 ಕೋಟಿ ರು. ಆದಾಯ ನಿರೀಕ್ಷಿಸಿದ್ದು 24.40 ಕೋಟಿ ರು. ವೆಚ್ಚ ತೋರಿಸಲಾಗಿದೆ. ಆದಾಯದಲ್ಲಿ ಆಸ್ತಿ ತೆರಿಗೆಯಿಂದ 1.25 ಕೋಟಿ ರು. ಮಳಿಗೆ ಬಾಡಿಗೆ 46.75ಲಕ್ಷ ರು, ನೀರು ಸರಬರಾಜು ಶುಲ್ಕ 45 ಲಕ್ಷ ರು, ಅಭಿವೃದ್ಧಿ ಶುಲ್ಕ 75 ಲಕ್ಷ ರು, ಸಂತೆ ಸುಂಕ, ಕೋಳಿ, ಮಾಂಸ, ಮೀನು ಮಾರಾಟದ ಅಂಗಡಿಗಳ ಹರಾಜಿನಿಂದ 18 ಲಕ್ಷ ರು. ಹಾಗೂ ಸರ್ಕಾರದಿಂದ 15.29 ಕೋಟಿ ರು. ಸೇರಿ ವಿವಿಧ ಅನುದಾನ ನಿರೀಕ್ಷಿಸಲಾಗಿದೆ. ಪಪಂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರು., ಬೀದಿ ದೀಪ ನಿರ್ವಹಣೆಗೆ 15 ಲಕ್ಷ ರು, ಚರಂಡಿ,ರಸ್ತೆ ಹಾಗೂ ಯಂತ್ರಗಳ ದುರಸ್ಥಿಗೆ 50 ಲಕ್ಷ ರು, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 24.40 ಲಕ್ಷ ರು. ವೆಚ್ಚ ತೋರಿಸಲಾಗಿದೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯೆ ಎಚ್.ಎಸ್.ರಶ್ಮಿ, ಬಜೆಟ್ ಕಳೆದ ಸಾಲಿನ ನಕಲಾಗಿದೆ. ಮುಂಗಡ ಪತ್ರದಲ್ಲಿ ಹೊಸದೇನೂ ಇಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮೊತ್ತದ ಹಣ ಮೀಸಲಿರಿಸಿರುವುದಾಗಿ ತೋರಿಸಲಾಗುತ್ತಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಕಳೆದ ಬಾರಿಯೂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರು. ಹಣ ಇಡಲಾಗಿತ್ತು. ಆದರೆ ಯಾವ ಮಳಿಗೆಯೂ ದುರಸ್ತಿ ಕಂಡಿಲ್ಲ, ಬಜೆಟ್ ಕೇವಲ ಅಕ್ಷರ ರೂಪಷ್ಟೇ ಸೀಮಿತ, ಪಟ್ಟಣ ಅಭಿವೃದ್ಧಿಯಲ್ಲಿ ಹಿಂದಕ್ಕೆ ಸಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯ ನಿಖಿಲ್ ಕುಮಾರ್ ಮಾತನಾಡಿ, ಬಹಳಷ್ಟು ಕೋಳಿ ಅಂಗಡಿಗಳ ಮಾಲೀಕರು ಪರವಾನಗಿ ಪಡೆಯದೆ ನಡೆಸುತ್ತಿರುವ ಕಾರಣ ಪಪಂಗೆ ವ್ಯಾಪಕವಾದ ಆದಾಯ ನಷ್ಟವಾಗುತ್ತಿದೆ. ಈ ಕುರಿತು ತಾವು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ, ಹೊಸದಾಗಿ ಪರವಾನಗಿ ನೀಡುವ ವೇಳೆ ಹಳೆಯ ಬಾಕಿ ವಸೂಲಿಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಪಪಂ ನಿರ್ಮಿಸಿದ್ದ 354 ನಿವೇಶನಗಳ ವಿತರಣೆ ಈ ವರೆಗೂ ನಡೆದಿಲ್ಲ. ಮನೆಯಿಲ್ಲದ ಬಡಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯ ಸೌಲಭ್ಯಗಳು ಜನರಿಗೆ ದೊರಕುತ್ತಿಲ್ಲ, ಅರಸೀಕರೆ ಶಾಸಕ ಶಿವಲಿಂಗೇಗೌಡ ಗೃಹಮಂಡಳಿ ಅಧ್ಯಕ್ಷರಾಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 50 ಎಕರೆ ಜಮೀನು ಖರೀದಿಸಿ ಗೃಹ ಮಂಡಳಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಪಟ್ಟಣದ ಬಡ ಜನರ ವಸತಿ ಸಮಸ್ಯೆ ನೀಗಲು ಪಪಂ ಅಡಳಿ ಮನವಿ ಸಲ್ಲಿಸುವಂತೆ ಸಲಹೆ ಮಾಡಿದರು.

ವಾಣಿಜ್ಯ ಮಳಿಗೆಗಳು ಪಪಂ ಆದಾಯದ ಪ್ರಮುಖ ಮೂಲವಾಗಿದೆ. ಇದರ ಹರಾಜು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸದಸ್ಯ ಪ್ರದೀಪ್ ಕುಮಾರ್ ಆರೋಪಿಸಿದರು.

ಸದಸ್ಯರಾದ ಕೃಷ್ಣಯ್ಯ, ಅನಿಕೇತನ್, ಲಕ್ಷ್ಮೀ, ಸುಮಿತ್ರ, ಹೂವಣ್ಣ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಅರಕಲಗೂಡು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಪಂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ 2024-25 ನೇ ಸಾಲಿನ ಉಳಿತಾಯ ಬಜೆಟ್ ಮಂಡಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌