ಹೆಬ್ರಿ: ತಾಲೂಕಿನ ಮುನಿಯಾಲು ಗೋಧಾಮ ಸಂಜೀವಿನಿ ಪಾರ್ಮ್ನಲ್ಲಿ ೧೯ರಿಂದ ೨೧ರವರೆಗೆ ನಡೆಯಲಿರುವ ಏಕ ಪವಿತ್ರ ಶ್ರೀಮನ್ನಾಗಮಂಡಲ ಮಹೋತ್ಸವದ ಪೂರ್ವಭಾವಿಯಾಗಿ ಗುರುವಾರ ಋತ್ವಿಜರ ಸ್ವಾಗತ ಹಾಗೂ ವೈದಿಕ ವಿಧಿ ವಿಧಾನಗಳು ನೆರವೇರಿದವು.
ಪ್ರತಿಸರಬಂಧ ಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣಾರಂಭ, ಉಗ್ರಾಣ ಮುಹೂರ್ತ ಹಾಗೂ ಅನ್ನಾರಾಧನಾ ಉಗ್ರಾಣ ಮುಹೂರ್ತ ವಿಧಿಗಳು ಜರುಗಿದವು. ಅಂಕುರಪೂಜೆ, ಸಪ್ತಶುದ್ಧಿ, ಭೂಶುದ್ಧಿ, ವಾಸ್ತು ವಿದ್ಯಾ ಕಲಾಪ, ರಾಕ್ಷೋಘ್ನ ಸೂಕ್ತ ಯಾಗ ಮತ್ತು ಪ್ರಾಕಾರ ಬಲಿ ಕಾರ್ಯಕ್ರಮ ನಡೆಯಿತು.
ಎಸ್ಕೆಎಫ್ನ ಉದ್ಯಮಿ ರಾಮಕೃಷ್ಣಾಚಾರ್ ದಂಪತಿ ಋತ್ವಿಜರನ್ನು ಸ್ವಾಗತಿಸಿದರು. ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ರಕ್ಷತ್ ಆರ್. ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಪದಾಧಿಕಾರಿಗಳು, ಉಪ ಸಮಿತಿ ಪ್ರಮುಖರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಪ್ರಕೃತಿ ರಕ್ಷಕ ನಾಗದೇವರ ಆಶೀರ್ವಾದ ಪಡೆದು ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪ್ರಕೃತಿ ಸಂರಕ್ಷಣೆಯ ಸಂದೇಶ ಸಾರುವ ಸಂಕಲ್ಪ ಕೈಗೊಳ್ಳಲಾಗಿದೆ. ದೊಂದಿ ಹಾಗೂ ತೈಲದ ದೀಪಗಳಿಂದ ಮಂಟಪ ಅಲಂಕಾರ, ಶಬ್ದಮಾಲಿನ್ಯ ರಹಿತ ಮೃದು ವಾದ್ಯ ಸಂಗೀತ, ಭಕ್ತರಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸುಬ್ರಹ್ಮಣ್ಯ ದೇವರ ಮೃತ್ತಿಕೆಯು ಸೇರಿದ ಮಣ್ಣಿನಿಂದ ತಯಾರಿಸಲಾದ ೫೦೦೦ ಬೀಜದುಂಡೆಗಳ ವಿತರಣೆಯೂ ನಡೆಯಲಿದೆ. ಮುನಿಯಾಲಿನಿಂದ ಗೋಧಾಮದವರೆಗೆ ನಾಗಮಂಡಲದ ಕಟೌಟ್ಗಳು ಹಾಗೂ ಬೆಳಕಿನ ಅಲಂಕಾರಗಳು ರಾರಾಜಿಸುತ್ತಿವೆ.