ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಅರಳೇಪೇಟೆ ಶ್ರೀ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ, ಜಿಲ್ಲೆಯ ಹರಗುರು ಚರಮೂರ್ತಿಗಳು ಮತ್ತು ಸಮಾಜದ ಹಿರಿಯರು ತೆಗೆದುಕೊಂಡಿರುವ ತೀರ್ಮಾನದಂತೆ ರಾಜ್ಯ ಸಮಿತಿಯ ಮಾರ್ಗಸೂಚಿಗಳನ್ವಯ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪಟ್ಟಿಗೆ ಎಲ್ಲರೂ ಒಮ್ಮತದ ಒಪ್ಪಿಗೆ ಸೂಚಿಸಿದ್ದು ಸಂಘಟನೆಯ ಉತ್ತಮ ಬೆಳವಣಿಗೆಯಾಗಿದ್ದು, ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುವುದು ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಿಮಗೆ ವಹಿಸಿರುವ ಪದಾಧಿಕಾರಿಗಳ ಸ್ಥಾನಗಳು ಹುದ್ದೆಯಲ್ಲ. ಬದಲಿಗೆ ನಿಮಗೆ ವಹಿಸಿರುವ ಜವಾಬ್ದಾರಿ ಎಂದು ಭಾವಿಸಿ ಎಲ್ಲರ ಸಹಕಾರ ಪಡೆದು ಸಮುದಾಯದ ಅಭಿವೃದ್ಧಿಗಾಗಿ ಸಂಘಟನೆಯನ್ನು ಸದೃಢವಾಗಿ ಕಟ್ಟೋಣ. ಜಿಲ್ಲೆಯಲ್ಲಿ 5 ಸಾವಿರ ಸದಸ್ಯತ್ವ ಮಾಡಬೇಕಿದ್ದು, ಪ್ರತಿಯೊಬ್ಬ ನಿರ್ದೇಶಕರು ತಲಾ 250 ಸದಸ್ಯತ್ವ ಮಾಡಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದರು.ಸಮಾಜದ ಹಿರಿಯರಾದ ಮಾದಾಪುರ ಶಿವಕುಮಾರಸ್ವಾಮಿ ಮಾತನಾಡಿ, ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ಅವರು ಪದಾಧಿಕಾರಿಗಳ ಆಯ್ಕೆ ವಿಷಯದಲ್ಲಿ ಹಿರಿಯರ ಹೆಗಲಿಗೆ ಜವಾಬ್ದಾರಿ ವಹಿಸಿದ್ದರು. ಅದರಂತೆ ನಾವು ಶ್ರೀಗಳ ಮಾರ್ಗದರ್ಶನ ಮತ್ತು ಸಲಹೆಯಂತೆ ಸಮಾಜ ಕಟ್ಟುವ ಸಂಘಟಕರನ್ನು ಆಯ್ಕೆ ಮಾಡಿ ಪಟ್ಟಿ ನೀಡಿದೆವು. ಅದಕ್ಕೆ ಆಯ್ಕೆ ಸಭೆ ಒಮ್ಮತದಿಂದ ಒಪ್ಪಿಗೆ ಸೂಚಿಸಿದೆ. ಇದರಿಂದ ಸಂಘಟನೆ ಕ್ರಿಯಾಶೀಲವಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸಮಾಜದ ಮುಖಂಡರಾದ ಅರ್ಚಕರಹಳ್ಳಿ ವಿಜಯ್ ಕುಮಾರ್, ಜನತಾ ನಾಗೇಶ್, ಯತೀಶ್, ಶಂಕರಪ್ಪ, ಜಗದೀಶ್, ಮಹೇಶ್, ಶಿವಲಿಂಗಯ್ಯ, ಬೆಂಕಿಮಹದೇವಯ್ಯ, ಶಿವಕುಮಾರ ಸ್ವಾಮಿ, ಅಕ್ಕಮಹದೇವಮ್ಮ, ಮಂಗಳಮ್ಮ, ಕೇಲಾಶ್ಶಂಕರ್, ಚಕ್ರಬಾವಿ ಜಗದೀಶ್ ಸೇರಿದಂತೆ ಜಿಲ್ಲಾ ಘಟಕದ ನಿರ್ದೇಶಕರು ಭಾಗವಹಿಸಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಮನಗರ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಉಪಾಧ್ಯಕ್ಷರಾಗಿ ಕನಕಪುರದ ಶಾಂಬಶಿವಯ್ಯ, ಮಾಗಡಿ ಸಿದ್ದಲಿಂಗಪ್ಪ. ಬಿ.ಆರ್. (ಈಶ), ರಾಮನಗರ ಸರಸ್ವತ್ತಮ್ಮ, ಚನ್ನಪಟ್ಟಣದ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯರ್ಶಿಯಾಗಿ ಮಾದಾಪುರ ಜಗದೀಶ್, ಕಾರ್ಯದರ್ಶಿಗಳಾಗಿ ವಿಭೂತಿಕೆರೆ ಶಿವಲಿಂಗಯ್ಯ, ವಿ.ಮಹೇಶ್ , ಶೀಲಾನಾಗರಾಜು, ಜಿ.ಜಗದೀಶ್, ಖಜಾಂಚಿಯಾಗಿ ಜಿ.ವಿ.ವೀರಭದ್ರಯ್ಯ ಆಯ್ಕೆಯಾಗಿದ್ದಾರೆ.