ಬೇಲೂರು: ತಾಲೂಕಿನ ಹಿರಿಕೋಲೆ ಗ್ರಾಮದ ಚಾಮದೇವನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ೫ ಎಕರೆ ಕಾಫಿ ತೋಟ ಭಸ್ಮವಾಗಿದೆ. ತಾಲೂಕಿನ ಕಸಬಾ ಹೋಬಳಿಯ ಹಿರಿಕೋಲೆ ಗ್ರಾಮದ ಚಾಮದೇವನಹಳ್ಳಿಯ ಸರ್ವೆ ನಂಬರ್ ೩೨/೧ ವರಲಕ್ಷ್ಮೀ ನಾಗರಾಜ್ಗೆ ಸೇರಿದ ೫ ಎಕರೆ ಕಾಫಿ ತೋಟದಲ್ಲಿ ನೆನ್ನೆ ಮದ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿ ೪ ಎಕರೆ ಜಮೀನಿನಲ್ಲಿ ಕಾಫಿ,ಮೆಣಸು,ಅಡಿಕೆ ಮತ್ತು ತೆಂಗು ಸೇರಿ ಇತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಇನ್ನೂಂದು ಎಕರೆಯಲ್ಲಿದ್ದ ಬಾಳೆ ಹಾಗೂ ಅಡಿಕೆಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಸುಟ್ಟುಹೋಗಿವೆ. ಗ್ರಾಮಸ್ಥರು ಕೂಡಲೇ ಅಗ್ನಿ ಶಾಮಕದಳವರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿ ಹಾಗೂ ತಾಲೂಕು ಕರವೇ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾತನಾಡಿ, ಮಳೆಯಿಲ್ಲದೆ ಬರದಿಂದಾಗಿ ರೈತರು ತತ್ತರಿಸಿದ್ದಾರೆ.ಇದರ ಜೊತೆಯಲ್ಲಿ ಈ ರೀತಿಯ ವಿದ್ಯುತ್ ಅವಘಡದಿಂದಾಗಿ ಬೆಂಕಿ ಅವಘಡ ಸಂಭವಿಸುತ್ತಿದ್ದು ಹೆಚ್ಚಿನ ರೀತಿಯಲ್ಲಿ ಹಾನಿಯಾಗುತ್ತಿದೆ.ಅಲ್ಲದೆ ವರಲಕ್ಷ್ಮೀ ನಾಗರಾಜ್ಗೆ ಅಲ್ಪಸ್ವಲ್ಪ ಜಮೀನಿದ್ದು ತೋಟವನ್ನು ಉಳಿಸುವ ಉದ್ದೇಶದಿಂದ ಜೆಟ್ ಗಳನ್ನು ಅಳವಡಿಸಿ ಪ್ರತಿನಿತ್ಯ ನೀರು ಹಾಯಿಸುಬುದರಲ್ಲದೆ ಹನಿ ನೀರಾವರಿ ಮಾಡುವ ಮೂಲಕ ತಮ್ಮ ತೋಟವನ್ನು ಫಸಲಿಗೆ ಬರುವಂತೆ ಮಾಡಿಕೊಂಡಿದ್ದರು.ಆದರೆ ಇಂತಹ ಅವಘಡ ಸಂಭವಿಸಿ ಅವರಿಗೆ ದಿಕ್ಕು ತೋಚದಂತಾಗಿದೆ.ಅಗ್ನಿ ಶಾಮಕದವರು ಬರದಿದ್ದರೆ ಇನ್ನೂ ದೊಡ್ಡ ಅನಾವುತವಾಗುತ್ತಿತ್ತು.ಲಕ್ಷಾಂತರ ರೂಪಾಯಿ ಮೌಲ್ಯದ ತೋಟ ಸಂಪೂರ್ಣ ಭಸ್ಮವಾಗಿದ್ದು ಕೂಡಲೇ ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.