
ಕನ್ನಡಪ್ರಭ ವಾರ್ತೆ, ತುಮಕೂರು
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್ ಮಾತನಾಡಿ, ನಿಟ್ಟೂರಿನ ಸಿದ್ಧಲಿಂಗೇಶ್ವರ ಎಲೆಕ್ಟ್ರಿಕಲ್ಸ್ ಮಾಲೀಕ , ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಶಶಿಕುಮಾರ್ ಅವರು ಕಳೆದ ಮಾರ್ಚ್ 31 ರಂದು ತಾತ್ಕಾಲಿಕ ಸಂಪರ್ಕ ಠೇವಣಿ ಹಿಂಪಡೆಯಲು ನೀಡಿದ್ದ ಮನವಿ ಬಗ್ಗೆ ವಿಚಾರಿಸಲೆಂದು ಕಚೇರಿಗೆ ಹೋಗಿದ್ದಾಗ ಅಲ್ಲಿನ ಅಧಿಕಾರಿ ದರ್ಶನ್ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನ ಮಾಡಿದರು. ಅಗೌರವದಿಂದ ನಡೆದುಕೊಂಡರು ಎಂದು ಹೇಳಿದರು.
ಈ ಸಂಬಂಧ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಪೊಲೀಸ್ ಕಂಪ್ಲೇಂಟ್ ಸಹ ನೀಡಲಾಗಿದೆ. ಗುತ್ತಿಗೆದಾರರ ಮೇಲೆ ದೌರ್ಜನ್ಯವೆಸಗಿದ ಅಧಿಕಾರಿ ದರ್ಶನ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಗುತ್ತಿಗೆದಾರರು ಬೆಸ್ಕಾಂ ಮತ್ತು ಗ್ರಾಹಕರ ನಡುವೆ ಸೇತುವೆಯಂತಿದ್ದಾರೆ. ಗ್ರಾಹಕರ ಕೆಲಸಕಾರ್ಯಗಳು ಸರಾಗವಾಗಿ ನಡೆಯಲು ಕಚೇರಿ ಅಧಿಕಾರಿಗಳು ಸಹಕಾರ ನೀಡಬೇಕು. ಗುತ್ತಿಗೆದಾರರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಗುತ್ತಿಗೆದಾರರ ಸಂಘದ ಮುಖಂಡ ದಾದಾಪೀರ್ ಮಾತನಾಡಿ, ಬೆಸ್ಕಾಂ ಕಚೇರಿಯ ಕೆಲವು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೌಜನ್ಯದಿಂದ ಸ್ಪಂದಿಸುತ್ತಿಲ್ಲ. ದರ್ಶನ್ ಅವರು ಗುತ್ತಿಗೆದಾರ ಶಶಿಕುಮಾರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿರುವುದು ಖಂಡನೀಯ, ಅವರನ್ನು ಅಮಾನತು ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬೆಸ್ಕಾಂ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ದರ್ಶನ್ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಇರುವ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ಒಟ್ಟಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.