ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ಆನೆಗಳ ವಾಕಥಾನ್...

KannadaprabhaNewsNetwork |  
Published : Oct 13, 2024, 01:02 AM IST
ರಾಜಮಾರ್ಗದಲ್ಲಿ ಆನೆಗಳ ವಾಕಥಾನ್... | Kannada Prabha

ಸಾರಾಂಶ

ನಂದಿಧ್ವಜ ಪೂಜೆ ವೇಳೆಗೆ ಇದ್ದ ಬಿಸಿಲು, ನಂದಿ ಧ್ವಜ ಪೂಜೆ ಮುಗಿಯುತ್ತಿದ್ದಂತೆ ಕಾರ್ಮೋಡ ಕವಿಯಿತು. ಈ ವೇಳೆಗಾಗಲೇ ನಿಶಾನೆ ಆನೆ ಧನಂಜಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿದ. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನ ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ಆನೆಗಳ ವಾಕಾಥಾನ್ ನೋಡಿ ನೆರೆದಿದ್ದ ಲಕ್ಷಾಂತರ ಮಂದಿ ಸಂಭ್ರಮಿಸಿದರು.

ನಂದಿಧ್ವಜ ಪೂಜೆ ವೇಳೆಗೆ ಇದ್ದ ಬಿಸಿಲು, ನಂದಿ ಧ್ವಜ ಪೂಜೆ ಮುಗಿಯುತ್ತಿದ್ದಂತೆ ಕಾರ್ಮೋಡ ಕವಿಯಿತು. ಈ ವೇಳೆಗಾಗಲೇ ನಿಶಾನೆ ಆನೆ ಧನಂಜಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿದ. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು. ಉಳಿದ ಆನೆಗಳು ಸಾಲಾನೆಗಳಾಗಿ ಸಾಗುವ ಮೂಲಕ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.

14 ಆನೆಗಳ ಪೈಕಿ 11 ಆನೆಗಳು ಮಾತ್ರ ಭಾಗಿ

ಈ ಬಾರಿ ದಸರೆಗಾಗಿ 14 ಆನೆಗಳನ್ನು ಕಾಡಿನಿಂದ ನಾಡಿಗೆ ತರಲಾಗಿತ್ತು. ಈ ಪೈಕಿ 11 ಆನೆಗಳು ಮಾತ್ರ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದವು. ಉಳಿದ 3 ಆನೆಗಳು ಅರಮನೆಯ ಆನೆ ಬಿಡಾರದಲ್ಲೇ ಉಳಿದಿದ್ದವು.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಲಕ್ಷ್ಮಿ ಮತ್ತು ಹಿರಣ್ಯಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಏಕಲವ್ಯ, ಕಂಜನ್, ಭೀಮ ಸಾಲಾನೆಗಳಾಗಿ ಸಾಗಿದವು. ಉಳಿದಂತೆ ರೋಹಿತ್, ದೊಡ್ಡಹರವೆ ಲಕ್ಷ್ಮಿ ಮತ್ತು ವರಲಕ್ಷ್ಮಿ ಆನೆಗಳು ಜಂಬೂಸವಾರಿ ಮೆರವಣಿಗೆಯಿಂದ ದೂರ ಉಳಿದಿದ್ದವು.

ಸುಗ್ರೀವ, ಕಂಜನ್ ಮತ್ತು ಏಕಲವ್ಯ ಆನೆಗಳು ಇದೇ ಮೊದಲ ಬಾರಿಗೆ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡು ಗಮನ ಸೆಳೆದವು. ಕಂಜನ್ ಮತ್ತು ಸುಗ್ರೀವ ಕಳೆದ ವರ್ಷ ದಸರೆಗೆ ಆಗಮಿಸಿದ್ದರೂ ಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ. ಏಕಲವ್ಯ ಇದೇ ಮೊದಲ ಬಾರಿಗೆ ದಸರೆ ಆಗಮಿಸಿದ್ದರೂ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಭರವಸೆ ಮೂಡಿಸಿತು.

ಇನ್ನೂ ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ಇದೇ ಮೊದಲ ಬಾರಿಗೆ ಅಂಬಾರಿ ಆನೆಗೆ ಕುಮ್ಕಿ ಆನೆಗಳಾಗಿ ಸಾಗಿ ಸೈ ಎನಿಸಿಕೊಂಡವು. ಕಳೆದ ಎರಡು ವರ್ಷಗಳಿಂದ ದಸರೆಗೆ ಆಗಮಿಸುತ್ತಿರುವ ರೋಹಿತ್ ಮತ್ತು ದೊಡ್ಡಹರವೆ ಲಕ್ಷ್ಮಿ ಆನೆಗೆ ಈ ಬಾರಿಯೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಲಭಿಸಿಲ್ಲ. ವಯಸ್ಸಿನ ಕಾರಣಕ್ಕೆ ವರಲಕ್ಷ್ಮಿ ಆನೆಯು ಮೆರವಣಿಗೆಯಿಂದ ದೂರ ಉಳಿದಿತ್ತು.

ದಸರಾ ಆನೆಗಳ ಜವಾಬ್ದಾರಿ

ಅಂಬಾರಿ ಆನೆ- ಅಭಿಮನ್ಯು

ಅಂಬಾರಿ ಆನೆಗೆ ಕುಮ್ಕಿ- ಲಕ್ಷ್ಮಿ ಮತ್ತು ಹಿರಣ್ಯಾ

ನಿಶಾನೆ ಆನೆ- ಧನಂಜಯ

ನೌಫತ್ ಆನೆ- ಗೋಪಿ

ಸಾಲಾನೆಗಳು- ಪ್ರಶಾಂತ, ಸುಗ್ರೀವ, ಮಹೇಂದ್ರ, ಏಕಲವ್ಯ, ಕಂಜನ್, ಭೀಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು - ಹುಷಾರು ಅಶೋಕ್, ನೀನೇ ಸತ್ತು ಹೋಗ್ತೀಯ : ಸಿಎಂ
ವಸುಂಧರಾ ಭೂಪತಿ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ