ಬಿ.ಶೇಖರ್ ಗೋಪಿನಾಥಂ
ಸಾಂಸ್ಕೃತಿಕ ನಗರಿ ಮೈಸೂರಿನ ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ಆನೆಗಳ ವಾಕಾಥಾನ್ ನೋಡಿ ನೆರೆದಿದ್ದ ಲಕ್ಷಾಂತರ ಮಂದಿ ಸಂಭ್ರಮಿಸಿದರು.
ನಂದಿಧ್ವಜ ಪೂಜೆ ವೇಳೆಗೆ ಇದ್ದ ಬಿಸಿಲು, ನಂದಿ ಧ್ವಜ ಪೂಜೆ ಮುಗಿಯುತ್ತಿದ್ದಂತೆ ಕಾರ್ಮೋಡ ಕವಿಯಿತು. ಈ ವೇಳೆಗಾಗಲೇ ನಿಶಾನೆ ಆನೆ ಧನಂಜಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿದ. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು. ಉಳಿದ ಆನೆಗಳು ಸಾಲಾನೆಗಳಾಗಿ ಸಾಗುವ ಮೂಲಕ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.14 ಆನೆಗಳ ಪೈಕಿ 11 ಆನೆಗಳು ಮಾತ್ರ ಭಾಗಿ
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಲಕ್ಷ್ಮಿ ಮತ್ತು ಹಿರಣ್ಯಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಏಕಲವ್ಯ, ಕಂಜನ್, ಭೀಮ ಸಾಲಾನೆಗಳಾಗಿ ಸಾಗಿದವು. ಉಳಿದಂತೆ ರೋಹಿತ್, ದೊಡ್ಡಹರವೆ ಲಕ್ಷ್ಮಿ ಮತ್ತು ವರಲಕ್ಷ್ಮಿ ಆನೆಗಳು ಜಂಬೂಸವಾರಿ ಮೆರವಣಿಗೆಯಿಂದ ದೂರ ಉಳಿದಿದ್ದವು.
ಇನ್ನೂ ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ಇದೇ ಮೊದಲ ಬಾರಿಗೆ ಅಂಬಾರಿ ಆನೆಗೆ ಕುಮ್ಕಿ ಆನೆಗಳಾಗಿ ಸಾಗಿ ಸೈ ಎನಿಸಿಕೊಂಡವು. ಕಳೆದ ಎರಡು ವರ್ಷಗಳಿಂದ ದಸರೆಗೆ ಆಗಮಿಸುತ್ತಿರುವ ರೋಹಿತ್ ಮತ್ತು ದೊಡ್ಡಹರವೆ ಲಕ್ಷ್ಮಿ ಆನೆಗೆ ಈ ಬಾರಿಯೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಲಭಿಸಿಲ್ಲ. ವಯಸ್ಸಿನ ಕಾರಣಕ್ಕೆ ವರಲಕ್ಷ್ಮಿ ಆನೆಯು ಮೆರವಣಿಗೆಯಿಂದ ದೂರ ಉಳಿದಿತ್ತು.
ದಸರಾ ಆನೆಗಳ ಜವಾಬ್ದಾರಿಅಂಬಾರಿ ಆನೆ- ಅಭಿಮನ್ಯು
ನಿಶಾನೆ ಆನೆ- ಧನಂಜಯ
ನೌಫತ್ ಆನೆ- ಗೋಪಿಸಾಲಾನೆಗಳು- ಪ್ರಶಾಂತ, ಸುಗ್ರೀವ, ಮಹೇಂದ್ರ, ಏಕಲವ್ಯ, ಕಂಜನ್, ಭೀಮ