ರಾಣಿಬೆನ್ನೂರು: ಗ್ಯಾರಂಟಿ ಯೋಜನೆ ಜಾರಿಯಿಂದ ಮಹಿಳೆಯರ ಆರ್ಥಿಕ ಸಶಸ್ತಿಕರಣಕ್ಕೆ ಒತ್ತು ನೀಡಿದಂತಾಗಿದೆ ಎಂದು ಬ್ಯಾಡಗಿ ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ದೇಶದಲ್ಲಿ ಬೆಲೆಗಳ ಏರಿಳಿತವಾಗುವ ಪರಿಣಾಮ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬಡ ಜನರು ಕುಟುಂಬ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ,ಗೃಹಲಕ್ಷ್ಮಿ ಯೋಜನೆ, ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ಅಕ್ಕಿ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಬಡವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಚಿಂತನೆಯಿಂದ ಇದರಲ್ಲಿ ರಾಜಕೀಯ ಮಾಡದೇ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.ಗ್ಯಾರಂಟಿ ಯೋಜನೆಗಳ ಜಾರಿಯಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಯಾವುದೇ ಧಕ್ಕೆ ಆಗಿಲ್ಲ. ಕುಡಿವ ನೀರು, ರಸ್ತೆ ಸೇರಿದಂತೆ ಮೂಲಸೌಲಭ್ಯ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ನುಡಿದಂತೆ ನಡೆಯಲಾಗುವುದು.ಯಾವುದೇ ಸುಳ್ಳು ಪ್ರಚಾರಕ್ಕೆ ಆದ್ಯತೆ ನೀಡಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಶೀರ್ವಾದ ಅಗತ್ಯವಿದೆ ಎಂದರು.
ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.ಸಿಡಿಪಿಒ ಪಾರ್ವತಿ ಹುಂಡೇಕಾರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಸಬಲೀಕರಣ. 80270 ಅರ್ಹರಿದ್ದಾರೆ. ಆ ಪೈಕಿ 70740 ನೋಂದಣಿ ಮಾಡಿಸಿದ್ದು 66765 ಫಲಾನುಭವಿಗಳಿಗೆ ಹಣ ಸಂದಾಯ. ಇದಲ್ಲದೆ ಇಲಾಖೆ ವತಿಯಿಂದ ಇ ಕೆವೈಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಾಕರಸಾ ಸಂಸ್ಥೆ ಡಿಪೋ ಮ್ಯಾನೇಜರ್ ಪ್ರಶಾಂತ ಸಂರ್ಗೆಸಿ ಮಾತನಾಡಿ, ಇದುವರೆಗೂ ತಾಲೂಕಿನ 74 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ.ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸ್ಥಳೀಯ ಘಟಕಕ್ಕೆ ₹22 ಕೋಟಿ ಹಣ ಜಮೆಯಾಗಿದೆ ಎಂದರು.
ತಹಸೀಲ್ದಾರ ಕೆ. ಗುರುಬಸವರಾಜ, ತಾಪಂ ಇಒ ಸುಮಲತಾ ಎಸ್.ಪಿ.,ಬಿಇಒ ಎಂ.ಎಚ್.ಪಾಟೀಲ,ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಹೆಸ್ಕಾಂ ಅಧಿಕಾರಿ ಪ್ರಸಾದ, ಶಹರ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ, ಪುಟ್ಟಪ್ಪ ಮರಿಯಮ್ಮನವರ, ಸಣ್ಣತಮ್ಮಪ್ಪ ಬಾರ್ಕಿ, ರುಕ್ಮಿಣಿ ಸಾವಕಾರ, ಶಿರಿನ್ ತಾಜ ಶೇಖ್, ಶೇಖಪ್ಪ ಹೊಸಗೌಡ್ರ, ಜಯಶ್ರೀ ಪಿಸೆ, ರಮೇಶ ಗುತ್ತಲ, ಶ್ರೀನಿವಾಸ ಹಳ್ಳಳ್ಳಿ, ರಾಮಪ್ಪ ನಾಯಕ, ಅಣ್ಣಪ್ಪ ಕಂಬಳಿ, ವೆಂಕಟೇಶ ಹೊಸಮನಿ ಮತ್ತಿತರರಿದ್ದರು.