ರಾಮನಗರ: ಯಾವುದೇ ವ್ಯಕ್ತಿ ಎತ್ತರಕ್ಕೆ ಏರಲು ಆತನ ಹಿನ್ನೆಲೆ ಆಸ್ತಿ, ಜಾತಿ, ಕುಟುಂಬ ಇತ್ಯಾದಿ ಕಾರಣಗಳಿಂದ ಗಟ್ಟಿಯಾಗಿರಬೇಕು. ಆದರೆ, ಅಂಬೇಡ್ಕರ್ ಅದ್ಯಾವುದು ಇಲ್ಲದೆ ಅಕ್ಷರದ ಕಾರಣದಿಂದಲೇ ಬಹು ಎತ್ತರಕ್ಕೆ ಬೆಳೆದು ಗೌರವ ಪಡೆದುಕೊಂಡರು. ಆದ್ದರಿಂದ ಪ್ರತಿ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಸಂಪತ್ತನ್ನಾಗಿ ಮಾಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಡಾ.ಅಂಬೇಡ್ಕರ್ ಅವರು ಓದಿ ಜ್ಞಾನ ಸಂಪಾದಿಸು, ಜ್ಞಾನವಿದ್ದರೆ ಜಗತ್ತು ನಿನಗೆ ಹೆದರುತ್ತೆ ಎಂದಿದ್ದರು. ಅಂಬೇಡ್ಕರ್ ಕೋಟ್ಯಂತರ ಜನರಿಗೆ ದಾರಿ ದೀಪ, ಮಾರ್ಗದರ್ಶಕರಾಗಿದ್ದಾರೆ. ಇಂದಿನ ಸಮಾನತೆಯ ಭಾರತ ಕಾಣಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಸಮಾಜದ ಕಟ್ಟಕಡೆಯ ವ್ಯಕ್ತಿ ಮೊಟ್ಟ ಮೊದಲಾದರೆ ನಾವು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ:ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಂಕೀರ್ಣದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಬೆಳ್ಳಿ ರಥದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಆವರಣದಿಂದ ಪ್ರಾರಂಭವಾಗಿ ಡಾ. ಅಂಬೇಡ್ಕರ್ ಭವನದವರೆಗೂ ಸಾಗಿತು.
ರಾಮನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.