ವಿಶ್ವವೇ ಮೆಚ್ಚಿದ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ನಮ್ಮದು. ಬಾಬಾ ಅವರು ಅಸ್ಪೃಶ್ಯತೆಯ ಬದುಕು ಕಟ್ಟಿಕೊಂಡು ಕುಡಿಯಲು ನೀರಿಲ್ಲ, ಬದುಕಲು ಸ್ವಾತಂತ್ರ್ಯವಿಲ್ಲದಿರುವುದನ್ನು ಅರಿತು ಶಿಕ್ಷಣವನ್ನೇ ಅಸ್ತ್ರವಾಗಿಸಿಕೊಂಡರು. ಮಹಾನ್ ಮೇಧಾವಿ ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ನಾಡಿಗೆ ನೀಡಿದ ಸಂವಿಧಾನ ಧಮನಿತರ, ನೊಂದವರ ಬದುಕಿಗೆ ಆಸರೆಯಾಗಿದೆ.
ಕಿಕ್ಕೇರಿ:
ಅನಕ್ಷರತೆ ದಾಸ್ಯ ಸೃಷ್ಟಿಸಿದರೆ, ಶಿಕ್ಷಣ ಸುಶಿಕ್ಷಿತ ಸಮಾಜ ಸೃಷ್ಟಿಸಲಿದೆ ಎಂದು ಕತ್ತಲೆ ಬದುಕಿಗೆ ಬೆಳಕು ನೀಡಿದ ಮಹಾನ್ ಚೇತನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಎಂದು ಕೆಪಿಎಸ್ ಶಾಲೆ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಬಡತನದ ಬೇಗೆಯಲ್ಲಿ ಕಹಿಯುಂಡು ಸಮಾಜ ಸುಧಾರಣೆಗೆ, ಸರ್ವರಿಗೂ ಸಮಬಾಳ್ವೆ ಸಿಗಲು ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿಯಾದ ಬಾಬಾ ಅವರು ಜಗತ್ತಿನ ಶಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ವಿಶ್ವವೇ ಮೆಚ್ಚಿದ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ನಮ್ಮದು. ಬಾಬಾ ಅವರು ಅಸ್ಪೃಶ್ಯತೆಯ ಬದುಕು ಕಟ್ಟಿಕೊಂಡು ಕುಡಿಯಲು ನೀರಿಲ್ಲ, ಬದುಕಲು ಸ್ವಾತಂತ್ರ್ಯವಿಲ್ಲದಿರುವುದನ್ನು ಅರಿತು ಶಿಕ್ಷಣವನ್ನೇ ಅಸ್ತ್ರವಾಗಿಸಿಕೊಂಡರು. ಮಹಾನ್ ಮೇಧಾವಿ ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ನಾಡಿಗೆ ನೀಡಿದ ಸಂವಿಧಾನ ಧಮನಿತರ, ನೊಂದವರ ಬದುಕಿಗೆ ಆಸರೆಯಾಗಿದೆ ಎಂದರು.ಸಂವಿಧಾನ ಸಮಾನತೆ, ವಿಶ್ವಭ್ರಾತೃತ್ವ, ಸಮಪಾಲು, ಸಮಬಾಳು ನೀಡುವ ಪವಿತ್ರ ಭಗವದ್ಗೀತೆಯಾಗಿದೆ. ಹುಟ್ಟಿನಿಂದ ಸಾಯುವವರೆಗೆ ಸಂವಿಧಾನದ ಕಾನೂನು ಗೌರವಿಸಿ ಬದುಕಬೇಕಿದೆ. ಪ್ರತಿಯೋರ್ವರಿಗೂ ಶಿಕ್ಷಣ ಸಮಾನವಾಗಿ ಲಭಿಸಿದ್ದಲ್ಲಿ ಮಾತ್ರ ಸುಸ್ಥಿರ ಸಮಾಜ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಬಲೀಕರಣ ಸಿಗಲಿದೆ. ಲೇಖನಿಯನ್ನು ಖಡ್ಗವಾಗಿ ಸ್ವೀಕರಿಸಿದರೆ ಶಿಕ್ಷಣ ನಮ್ಮದಾಗಿ ಮೌಢ್ಯ, ಕಂದಚಾರ ದೂರವಾಗಲಿದೆ. ಧ್ವನಿ ಎತ್ತುವ ಶಕ್ತಿ ಬಂದರೆ ಸಮಾನತೆ, ಸಮಬಾಳು ಎಲ್ಲವೂ ಸಿಗಲಿದೆ ಎಂಬುದನ್ನು ತೋರಿಸಿಕೊಟ್ಟವರು ಅಂಬೇಡ್ಕರ್ ಎಂದು ನುಡಿದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು.ಎನ್ಸಿಸಿ ಘಟಕ ಯೋಜನಾಧಿಕಾರಿ ಎಸ್.ಎಂ. ಬಸವರಾಜು, ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ದೀಪಕ್, ಗಿರೀಶ್, ಪಲ್ಲವಿ, ಸಂಜನಾ, ಲೀಲಾವತಿ ಇದ್ದರು.