ಶಾಮನೂರು ನೆನಪು ಶಾಶ್ವತವಾಗಿ ಉಳಿಸಲು ಒತ್ತು

KannadaprabhaNewsNetwork |  
Published : Mar 31, 2026, 01:30 AM IST
30ಕೆಡಿವಿಜಿ4-ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಶಿವಣ್ಣ, ಕೊಳ್ಳೆಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಿವಂಗತ ಶಾಮನೂರು ಶಿವಶಂಕರಪ್ಪನವರ ನೆನಪನ್ನು ಶಾಶ್ವತವಾಗಿ ಉಳಿಯಬೇಕಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರುಗೆ ದಕ್ಷಿಣ ಕ್ಷೇತ್ರದಿಂದ ಜಯ ಸಾಧಿಸುವ ಮೂಲಕ ಜನರ ನಿರೀಕ್ಷೆಗೆ ತಕ್ಕಂತಹ ಸಮಾಜ ಸೇವಕನಾಗಲಿದ್ದಾನೆ ಎಂದು ಕೊಳ್ಳೆಗಾಲದ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ನಂಜುಂಡ ಸ್ವಾಮಿ ಹೇಳಿದ್ದಾರೆ.

- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಗೆಲುವು ನಿಶ್ಚಿತ: ನಂಜುಂಡಸ್ವಾಮಿ, ಶಿವಣ್ಣ ವಿಶ್ವಾಸ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಿವಂಗತ ಶಾಮನೂರು ಶಿವಶಂಕರಪ್ಪನವರ ನೆನಪನ್ನು ಶಾಶ್ವತವಾಗಿ ಉಳಿಯಬೇಕಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರುಗೆ ದಕ್ಷಿಣ ಕ್ಷೇತ್ರದಿಂದ ಜಯ ಸಾಧಿಸುವ ಮೂಲಕ ಜನರ ನಿರೀಕ್ಷೆಗೆ ತಕ್ಕಂತಹ ಸಮಾಜ ಸೇವಕನಾಗಲಿದ್ದಾನೆ ಎಂದು ಕೊಳ್ಳೆಗಾಲದ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ನಂಜುಂಡ ಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಕುಟುಂಬಕ್ಕೆ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥಗೆ ಪಕ್ಷ ಅವಕಾಶ ನೀಡಿದೆ. ತನ್ನ ತಾತನ ಅಭಿಲಾಷೆಯಂತೆ ಜನಸೇವೆ, ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಸಮರ್ಥ ಶಾಮನೂರು ಉತ್ತಮ ಶಾಸಕನಾಗಲಿದ್ದಾನೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ಅನಿರೀಕ್ಷಿತ ಉಪ ಚುನಾವಣೆ ಇದಾಗಿದೆ. ದಾವಣಗೆರೆಯ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಪ್ರಗತಿಗೆ ಶಾಮನೂರು ಕೊಡುಗೆ ಇದೆ. ಶಾಮನೂರು ಶಿವಶಂಕರಪ್ಪನವರ ಹಾದಿಯಲ್ಲಿ ಸಾಗಬೇಕೆಂಬ ಸೂಚನೆಯೊಂದಿಗೆ ಪಕ್ಷವು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಿದೆ. 3 ದಶಕದಿಂದಲೂ ಶಾಮನೂರು ಕುಟುಂಬದೊಂದಿಗೆ ತಮ್ಮ ಒಡನಾಟವಿದ್ದು, ತಮ್ಮ ಭಾಗದ ಅನೇಕ ದೇವಸ್ಥಾನ, ಪುಣ್ಯಕ್ಷೇತ್ರಗಳಿಗೆ ಶಾಮನೂರು ಶಿವಶಂಕರಪ್ಪ ಉದಾರ ದೇಣಿಗೆ ನೀಡಿ, ಧಾರ್ಮಿಕ ಕ್ಷೇತ್ರಗಳಿಗೆ ಸಾಮಾಜಿಕ ಶಕ್ತಿ ತುಂಬಿದವರು ಎಂದು ಸ್ಮರಿಸಿದರು.

ದಕ್ಷಿಣ ಕ್ಷೇತ್ರದಲ್ಲಿ ಜಯ ಸಾಧಿಸುವ ಮೂಲಕ ಸಮರ್ಥ ಶಾಮನೂರು ತನ್ನ ತಂದೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸಹಕಾರದಲ್ಲಿ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶ್ರಮಿಸಲಿದ್ದಾನೆ. ಕೈಗಾರಿಕೆಗಳನ್ನು ಸ್ಥಾಪಿಸಿ, ಜನರಿಗೆ ಆರ್ಥಿಕ ಶಕ್ತಿ ತುಂಬಿದ್ದು ಶಾಮನೂರು ಕುಟುಂಬ. ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದ್ದಲ್ಲದೇ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನೂ ಈ ಕುಟುಂಬ ಮಾಡಿದೆ. ಇಂತಹ ಕುಟುಂಬಕ್ಕೆ ದಕ್ಷಿಣ ಕ್ಷೇತ್ರ, ಜಿಲ್ಲೆಯ ಮತದಾರರ ಆಶೀರ್ವಾದ ಸದಾ ಇರಲಿದೆ ಎಂದು ಅವರು ಹೇಳಿದರು.

ಮೀಸಲಾತಿ ವಿಚಾರದಲ್ಲಿ ಎಡ-ಬಲ ಅಂತೆಲ್ಲಾ ಗೊಂದಲ ನಿರ್ಮಾಣವಾಗಿದೆ. ಸದ್ಯ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಯಾವುದನ್ನೂ ನೇರವಾಗಿ ಘೋಷಣೆ ಮಾಡುವಂತಿಲ್ಲ. ಮಾ.27ಕ್ಕೆ ಸಂಪುಟ ಸಭೆ ಕರೆದು, ಮೀಸಲಾತಿ ವಿಚಾರದ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ, ಸರ್ಕಾರವು ನೀತಿ ಸಂಹಿತೆ ಕಾರಣಕ್ಕೆ ಈ ವಿಚಾರವನ್ನು ಮುಂದೂಡಿದೆ. ಕಾಂಗ್ರೆಸ್ ಸರ್ಕಾರವು ಸಾಮಾಜಿಕ ನ್ಯಾಯ ನೀಡಲು ಬದ್ಧವಿದೆ. ನಾವೂ ಅದಕ್ಕೆ ಬದ್ಧರಿದ್ದೇವೆ. ಚುನಾವಣೆ ನಂತರ ಈ ಬಗ್ಗೆ ಸರ್ಕಾರ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ನಂಜುಂಡಸ್ವಾಮಿ ತಿಳಿಸಿದರು.

ಮಾಜಿ ಸಚಿವ ಶಿವಣ್ಣ ಮಾತನಾಡಿ, ಕಾಂಗ್ರೆಸ್ ಅಂದರೆ ಎಲ್ಲರಿಗೂ ಸ್ಪಂದಿಸುವ ಪಕ್ಷವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಉತ್ತಮ ಅಭ್ಯರ್ಥಿ, ಉತ್ತಮ ಕುಟುಂಬಕ್ಕೆ ಟಿಕೆಟ್ ನೀಡಿದೆ. ಶಾಮನೂರು ಶಿವಶಂಕರಪ್ಪನವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ತಮ್ಮ ಕ್ಷೇತ್ರದ ಹೆಗ್ಗಡೆದೇವನಕೋಟೆಗೆ ಬರುವ ಭಕ್ತರಿಗೆ ಅತಿಥಿ ಗೃಹವನ್ನು ಶಾಮನೂರು ನಿರ್ಮಿಸಿಕೊಟ್ಟಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ಒಲವು ಕಂಡುಬರುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಗ್ಯಾಸ್ ಸಮಸ್ಯೆ ಪರಿಹರಿಸಲಾಗದೇ, ಪರಿತಪಿಸುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಮರ್ಥ ಶಾಮನೂರು ಇಲ್ಲಿ ಜಯ ಸಾಧಿಸುವುದು ನಿಶ್ಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಮಾನಸ ತಿಪ್ಪೇಸ್ವಾಮಿ ಇತರರು ಇದ್ದರು.

- - -

-30ಕೆಡಿವಿಜಿ4: ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಶಿವಣ್ಣ, ಕೊಳ್ಳೆಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!
ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ