ಕನ್ನಡಪ್ರಭ ವಾರ್ತೆ ಕೋಲಾರಮುಳಬಾಗಿಲು ತಾಲೂಕಿನ ಐತಿಹಾಸಿಕ ದೇವಾಲಯಗಳು, ರಸ್ತೆ ಮಾರ್ಗಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂಪಣ ನಾಗರೀಕ ವೇದಿಕೆ ಸಭೆಯಲ್ಲಿ ಅವರು ಮಾತನಾಡಿ, ಮುಳಬಾಗಿಲು ತಾಲೂಕಿನ ೮ ಐತಿಹಾಸಿಕ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ವೇದಿಕೆಯ ಸದಸ್ಯರು ಕೋರಿದ್ದಾರೆ. ಈ ಬಗ್ಗೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನ ವಿವಿಧ ಭಾಗಗಳಲ್ಲಿ ಸುಸರ್ಜಿತ ಹಾಗೂ ನಿರ್ಮಲ ಆಸ್ಪತ್ರೆಗಳ ನಿರ್ಮಾಣವಾಗಬೇಕಾಗಿದೆ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಮುಳಬಾಗಿಲು ಎ.ಪಿ.ಎಂ.ಸಿ ಮಾರುಕಟ್ಟೆ ಒತ್ತುವರಿಯಾಗುತ್ತಿದ್ದು, ಆವರಣವು ಸರ್ವೇ ನಡೆಸಿ ಕಾಂಪೌಡ್ ನಿರ್ಮಿಸಲು ಸೂಚಿಸಿದರು.
ಕಸಾಯಿಖಾನೆಗಳಿಗೆ ಎಚ್ಚರಿಕೆಕಸಾಯಿಖಾನೆ ತ್ಯಾಜ್ಯವನ್ನು ನಗರದ ವಿವಿಧ ಭಾಗಗಳಲ್ಲಿ ಚೀಲಗಳಿಗೆ ತುಂಬಿಸಿ ಎಸೆಯುತ್ತಾರೆ. ಆದ್ದರಿಂದ ನಗರಸಭೆಯ ಅಧಿಕಾರಿಗಳು ಕಸಾಯಿಖಾನೆಗಳ ವಿರುದ್ಧ ದೂರನ್ನು ದಾಖಲಿಸಿ ಅವರ ಪರವಾನಿಗೆ ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ನಗರಸಭೆಯವರು ಅರಿವು ಮೂಡಿಸಲು ಸೂಚಿಸಿದರು.