ಕುಷ್ಟಗಿ: ಸಾರ್ವಜನಿಕರ ಮನೆಯಲ್ಲಿ ಬೆಳಕಾಗಲು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿರುವ ವಿದ್ಯುತ್ ಇಲಾಖೆಯ ನೌಕರರ ಕಾರ್ಯ ಶ್ಲಾಘನೀಯ ಎಂದು ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.
ವಿದ್ಯುತ್ ಇಲಾಖೆ ನೌಕರರು ಜೀವದ ಹಂಗು ತೊರೆದು ಕಾರ್ಯ ಮಾಡುತ್ತಿದ್ದು, ಸಾರ್ವಜನಿಕರು ಇವರಿಗೆ ಗೌರವ ಕೊಡುವದರ ಜತೆಗೆ ಇವರ ಕಾರ್ಯ ಪ್ರಶಂಸಿಸಬೇಕು ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯ ಮಾಡಿದ್ದರಿಂದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದರು.ಕೊಪ್ಪಳ ವಿವಿ ಕುಲಪತಿ ಡಾ.ಎಸ್.ವಿ.ಡಾಣಿ ಮಾತನಾಡಿ, ಜಾತಿ ಧರ್ಮ ಎಂಬ ಬೇಧಭಾವವಿಲ್ಲದೆ ಎಲ್ಲರೂ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರ ಮನೆಯ ನಂದಾದೀಪದಂತೆ ಹಗಲು ರಾತ್ರಿಯನ್ನದೆ ಮಳೆ ಚಳಿಯನ್ನದೆ ವಿದ್ಯುತ್ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉತ್ತಮ ಸೇವೆಗೈದ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳನ್ನು ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಜೆಸ್ಕಾಂ ಇಲಾಖೆಯ ನೌಕರರಾದ ಜ್ಯೋತಿ, ಜಂಬುನಾಥ, ಶಿವರುದ್ರಪ್ಪ, ಎಂ.ಎಂ. ಮುರಗೋಡ್, ಶರಣಬಸಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಮಲ್ಲಪ್ಪ. ಬಂಕದಮನಿ, ಮರಿಗೌಡ ಗೌಡರ, ಬಸವರಾಜ ಸಂಗಮೇಶ ಹಿರೇಮಠ, ಕರಿಬಸಮ್ಮ ಪಟ್ಟಣಶೆಟ್ಟಿ, ಭೂಮೇಶ, ವಿದ್ಯುತ್ ಗುತ್ತಿಗೆದಾರರು, ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಹಲವರು ಇದ್ದರು.