ಗದಗ: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಜತೆಗೆ ದುಡಿಮೆಗೆ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ನೆರವಾಗುತ್ತಿದೆ ಎಂದು ಜಿಪಂ ಸಹಾಯ ನಿರ್ದೇಶಕ ಸಿ.ಆರ್. ಮುಂಡರಗಿ ಹೇಳಿದರು.
ಕೂಲಿ ಪಾವತಿಯಲ್ಲಿ ಗಂಡು- ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ, ಪ್ರತಿ ದಿನಕ್ಕೆ 370 ರುಪಾಯಿ ಕೂಲಿ ಸರಕಾರ ನಿಗದಿ ಪಡಿಸಿದೆ. ನರೇಗಾ ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ, ಆರೋಗ್ಯ ತಪಾಸಣೆ ಶಿಬಿರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡಲಾಗಿದೆ. ಚಿಕ್ಕ ಮಕ್ಕಳ ನೋಡಿಕೊಳ್ಳಲು ಕೂಸಿನ ಮನೆ ತೆರೆಯಲಾಗಿದೆ. ಗ್ರಾಮಸ್ಥರು ಇದರ ಸದಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕುರ್ತಕೋಟಿ ಗ್ರಾಮದಲ್ಲಿ ಕಂದಕ ಬದುಗಳು ಮಾದರಿಯಾಗಿವೆ. ಕೂಲಿಕಾರರು ತಮ್ಮಗೆ ತಿಳಿಸಿದಂತೆ ಕಂದಕಗಳನ್ನು ರಚಿಸಿದ್ದಾರೆ. ಇದೆ ರೀತಿ ಕೆಲಸವನ್ನ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅವರು ಮಾತನಾಡಿ, ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಿಂದಲೇ ಗ್ರಾಮದ ಜನರಿಗೆ ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿ ಆರಂಭಿಸುವ ರೂಢಿ ಇದೆ. ಗ್ರಾಮದ ಪ್ರತಿ ಕುಟುಂಬದವರಿಗೂ ಇದು ಅನುಕೂಲವಾಗಿದೆ. ಸರಕಾರ ಪಾರದರ್ಶಕ ಆಡಳಿತಕ್ಕಾಗಿ ಹಲವು ಹೊಸ ಹೊಸ ಉಪ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ನಾವು ನೀವೆಲ್ಲ ಅವುಗಳನ್ನು ಪಾಲಿಸಿಕೊಂಡು ಮುಂದುವರಿಯಬೇಕು ಎಂದರು. ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾ.ಉ) ಕುಮಾರ ಪೂಜಾರ ಮಾತನಾಡಿ, ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಅಳವಡಿಸಬೇಕು. ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಶೋಕ ಶಿರಹಟ್ಟಿ, ಮುತ್ತಣ್ಣ ಸುಕಂದ, ವೀರಣ್ಣ ಕೋರಿ, ಯಲ್ಲಪ್ಪ ಬೇವಿನಮರದ, ಬಕ್ಷಿ ತಹಶೀಲ್ದಾರ, ಗ್ರಾಪಂ ಎಸ್ಡಿಎ ಈರಪ್ಪ ಪೂಜಾರ, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಬಿಎಫ್ಟಿ ಸೋಮಶೇಖರ ತರಬಿನ್, ಡಿಇಒ ಶಿವಾನಂದ ಹುಬ್ಬಳ್ಳಿ, ಮೌಲಾಸಾಬ್ ಚಲ್ಲಮರದ, ಜಿಕೆಎಂ ಜಿ.ಐ. ಕಲ್ಗುಡಿ, ಕಾಯಕ ಬಂಧುಗಳು ಇತರರಿದ್ದರು.