ಕುಮಟಾ: ದೇಶಕ್ಕೆ ಸೈನಿಕರ ಸೇವೆ ಶ್ರೇಷ್ಠವಾದದ್ದು. ಮಾಜಿ ಸೈನಿಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗುವುದು ಸಂತೋಷದ ವಿಚಾರ. ಯುವಕರನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾರತೀಯ ಸೈನ್ಯ ಸೇರುವಂತೆ ಮಾಜಿ ಸೈನಿಕರು ಪ್ರೋತ್ಸಾಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಪಟ್ಟಣದ ಮಹಾಸತಿ ಸಭಾಭವನದಲ್ಲಿ ಇತ್ತೀಚೆಗೆ ಮಾಜಿ ಸೈನಿಕರ ಸಂಘ ಉದ್ಘಾಟಿಸಿ ಮಾತನಾಡಿದರು.ಮಾಜಿ ಸೈನಿಕ ಮಂಜುನಾಥ ಪಟಗಾರ, ಮಾಜಿ ಸೈನಿಕರಿಗೆ ಸಿಗಬೇಕಾದ ಸೌಕರ್ಯಗಳನ್ನು ಆಡಳಿತ ವ್ಯವಸ್ಥೆ ಅಡೆತಡೆಗಳಿಲ್ಲದೇ ಒದಗಿಸಲಿ ಎಂದರು.
ಅಡಕೆ ಕದ್ದ ಆರೋಪಿಯ ಬಂಧನ
ಶಿರಸಿ: ಮನೆಯ ಜಗಲಿಯಲ್ಲಿ ಸುಲಿದು ಚೀಲದಲ್ಲಿ ತುಂಬಿಟ್ಟ ಸುಮಾರು 75 ಕೆಜಿ ತೂಕದ ಅಡಕೆಯನ್ನು ಕಳ್ಳತನ ನಡೆಸಿದ್ದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಬೊಮ್ಮನಳ್ಳಿಯ ಪ್ರಭಾಕರ ಗಣಪತಿ ಭಂಡಾರಿ(62) ಬಂಧಿತ ವ್ಯಕ್ತಿ.ಯಾರೋ ಕಳ್ಳರು ಮನೆಯ ಜಗಲಿಯಲ್ಲಿ ಸುಲಿದು ಚೀಲದಲ್ಲಿ ತುಂಬಿಟ್ಟ ಸುಮಾರು 75 ಕೆಜಿ ತೂಕದ ₹30 ಸಾವಿರ ಮೌಲ್ಯದ ಅಡಕೆಯನ್ನು ಕಳ್ಳತನ ಮಾಡಿದ ಬಗ್ಗೆ ಬೊಮ್ಮನಳ್ಳಿಯ ಗಣಪತಿ ರಾಮಕೃಷ್ಣ ಹೆಗಡೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ ₹30 ಸಾವಿರ ಮೌಲ್ಯದ 75 ಕೆಜಿ ತೂಕದ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ಜಗದೀಶ ನಾಯ್ಕ, ಡಿಎಸ್ಪಿ ಗಣೇಶ್ ಕೆ.ಎಲ್., ಗ್ರಾಮೀಣ ಠಾಣೆ ಪಿಐ ಸೀತಾರಾಮ.ಪಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ತನಿಖಾ ಪಿಎಸ್ಐ ದಯಾನಂದ್ ಜೋಗಳೇಕರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾದೇವ ನಾಯಕ್, ಗಣಪತಿ ನಾಯ್ಕ, ಯಲ್ಲಪ್ಪ ಪೂಜೆರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.