ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಾತಿ ಪಿಡುಗು ತೊಡೆದು ಹಾಕಲು ಸಾಮೂಹಿಕ ವಿವಾಹಗಳು ಪ್ರೇರಣೆ ಒದಗಿಸುತ್ತವೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಮಹಾಸ್ವಾಮಿಗಳು ಹೇಳಿದರು.ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಪಾ್ಲ್ಗೊಂಡು ಮಾತನಾಡಿದ ಶ್ರೀಗಳು ಮಧ್ಯಮ ವರ್ಗದವರು, ಬಡವರು ಈ ಕಾಲದಲ್ಲಿ ದುಂದುವೆಚ್ಚ ಮಾಡಿ ವಿವಾಹ ಮಾಡುವುದು ಕಷ್ಟಸಾಧ್ಯ. ದುಡಿಯುವ ವರ್ಗ ಸಾಲ ಮಾಡಿ ವಿವಾಹ ಮಾಡುವುದನ್ನು ತಪ್ಪಿಸಲು ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಾಹವಾಗುವವರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಬಸವಾದಿ ಶರಣರ ಆದರ್ಶದ ಮಾತಿನಂತೆ ಜಾತಿ ಭೇದ ತೊಡೆದು ಒಂದೇ ವೇದಿಕೆಯಲ್ಲಿ ವಿವಾಹವಾಗುವುದಾಗಿದೆ ಎಂದರು.
ಶ್ರೀಮಠವು ಅಮಾವಾಸ್ಯೆ, ಹುಣ್ಣಿಮೆ ನೋಡದೆ ವಿವಾಹಗಳನ್ನು ಏರ್ಪಡಿಸುತ್ತ ಬಂದಿದೆ. ಇಂದು ಹುಣ್ಣಿಮೆಯಾದರೂ ವಿವಾಹಗಳು ನೆರವೇರುತ್ತಿವೆ. ಅದು ಶ್ರೀಮಠದ ಆದರ್ಶ ಕಾರ್ಯವಾಗಿದೆ ಸಾರ್ವಜನಿಕರು ದುಂದುವೆಚ್ಚ ಮಾಡದೆ ತಮ್ಮ ಮಕ್ಕಳ, ಮೊಮ್ಮಕ್ಕಳ ವಿವಾಹವನ್ನು ಸರಳವಾಗಿ ಸಾಮೂಹಿಕ ವಿವಾಹದಲ್ಲಿಯೇ ಮಾಡಿ ಎಂದು ಮನವಿ ಮಾಡಿದರು.ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಮನೆ ಕಟ್ಟಿ ನೋಡು; ಮದುವೆ ಮಾಡಿ ನೋಡು ಎಂಬ ಮಾತಿದೆ. ಕಾರಣ ಎರಡೂ ಕಷ್ಟದ ಕೆಲಸಗಳು. ಅಂತಹ ಕಷ್ಟದ ಕೆಲಸವನ್ನು ಮುರುಘಾಮಠವು ಸುಮಾರು 35 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವದ ಮೂಲಕ ಮಾಡುತ್ತ ಬಂದಿದೆ. ಸತಿ ಪತಿಗಳ ನಡುವೆ ಪ್ರೀತಿ ಇರಬೇಕು. ಅದರಿಂದ ಸುಖ ಸಂಸಾರ ಸಾಧ್ಯ. ಸಿಹಿಯಾದ ಜೀವನ ಸತಿ ಪತಿಗಳು ಒಂದಾದಾಗ ಮಾತ್ರ ಸಾಧ್ಯ ಎಂದರು.
ಸಂಗೀತ ತಾಳ ಒಂದಾದಾಗ ಕೇಳಲು ಹಿತವಾಗಿರುವುದು. ಅದರಂತೆ ಗಂಡ-ಹೆಂಡತಿ ಒಂದಾಗಿದ್ದರೆ ಮಾತ್ರ ಉತ್ತಮ ಜೀವನ ಸಾಧ್ಯ. ಮದುವೆಯಲ್ಲಿ ಗಂಡು ಹೆಣ್ಣಿಗೆ ತಾಳಿ ಕಟ್ಟುತ್ತಾರೆ. ಅದರ ಅರ್ಥ ತಾಳ್ಮೆಯಿಂದ ಜೀವನ ನಡೆಸಿ ಎಂಬುದಾಗಿದೆ. ಕಾಯಕದಿಂದ ಪ್ರಗತಿ ಸಾಧ್ಯ. ಕೂತು ಉಂಡರೆ ಕುಡುಕೆ ಹೊನ್ನು ಸಾಲದು ಎಂಬುದನ್ನು ಅರಿವಿನಲ್ಲಿಟ್ಟುಕೊಂಡಿರಬೇಕು. ಇಂದಿನ ದಿನಮಾನಗಳಲ್ಲಿ ತಾಳ್ಮೆ, ದುಡಿಮೆ, ಪ್ರೀತಿ ಇದ್ದರೆ ನೆಮ್ಮದಿಯನ್ನು ಕಾಣಬಹುದು. ಅತ್ತೆ ಸೊಸೆಯಂದಿರು ಹೊಂದಿಕೊಂಡು ಹೋಗಬೇಕೆಂದು ತಿಳಿಹೇಳಿದರು. ನೇತ್ರತಜ್ಞೆ ಡಾ.ಅನುಶ್ರೀ ಅವರು ಕುರುಡುತನ ಬಗ್ಗೆ ಮಾತನಾಡಿ, ಭಾರತದಲ್ಲಿ 40 ರಿಂದ 50 ವಯಸ್ಸಿನವರಲ್ಲಿ ಎರಡೂ ಕಣ್ಣುಗಳು ಕಾಣದಿರುವಂತಹ ಸಂಖ್ಯೆ ಶೇ.40 ರಷ್ಟಿದೆ. ಅದಕ್ಕೆ ಪೂರಕವಾಗಿ ಅವರಿಗೆ ಪುನರ್ ದೃಷ್ಟಿಯನ್ನು ನೀಡಲು ನೇತ್ರಶಸ್ತ್ರ ಚಿಕಿತ್ಸೆ ಮಾಡಿಸುವುದು ಅವಶ್ಯಕವಾಗಿದೆ. ಇದಕ್ಕೆ ಕಣ್ಣುಗಳ ದಾನ ಅವಶ್ಯಕ. ಒಂದುವರ್ಷದ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳ ಕಣ್ಣುಗಳನ್ನು ದಾನ ಪಡೆದು ಬೇರೆಯವರಿಗೆ ಚಿಕಿತ್ಸೆ ನೀಡಬಹುದು. ಮೃತ ವ್ಯಕ್ತಿಯ 2 ಕಣ್ಣುಗಳ ದಾನದಿಂದ 4 ಜನರಿಗೆ ದೃಷ್ಟಿಯನ್ನು ನೀಡಬಹುದು. ಇದೇ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ಪುನಜ್ಯೋತಿ ಐ ಬ್ಯಾಂಕಿನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಐ ಬ್ಯಾಂಕಿನ ನಿರ್ದೇಶಕ ಎಸ್.ವಿ. ಗುರುಮೂರ್ತಿ, ಐ ಬ್ಯಾಂಕ್ನ ಅಧ್ಯಕ್ಷ ಎಸ್. ವೀರೇಶ್, ಮಧುಸೂಧನ್ ಇದ್ದರು.ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 2 ಜೋಡಿ ಅಂತರ್ಜಾತಿ ಸೇರಿದಂತೆ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.