ಹಾನಗಲ್ಲ: ಸಂಗೀತ ಸಂಸ್ಕೃತಿಯ ಉಳಿವಿಗೆ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ಕೊಡುಗೆ ಅನನ್ಯ ಹಾಗೂ ಅಪಾರವಾಗಿದ್ದು, ಸಂಗೀತ ಸಾಧಕರನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ಇಂದಿನ ತೀರ ಅಗತ್ಯವಾಗಿದೆ ಎಂದು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ನುಡಿದರು.ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಹಾನಗಲ್ಲಿನ ಸರಸ್ವತಿ ಸಂಗೀತ ವಿದ್ಯಾಲಯ, ಶೇಷಗಿರಿಯ ಗಜಾನನ ಯುವಕ ಮಂಡಳ ಸಂಯುಕ್ತವಾಗಿ ಆಯೋಜಿಸಿದ ಸ್ವರ ಸಾಮ್ರಾಟ ಪಂ. ಬಸವರಾಜ ರಾಜಗುರು ಅವರ ಸ್ಮೃತಿ ಸಂಗೀತೋತ್ಸವದ ಸಾನಿಧ್ಯವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಂಗೀತದ ಅಭಿರುಚಿ ಬೆಳೆಸಬೇಕು. ಅದಕ್ಕಾಗಿ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಸಾಕ್ಷಿ ಮಾಡಬೇಕು. ಕಲಾವಿದರನ್ನು ಪ್ರೋತ್ಸಾಹಿಸಿದರೆ ಮಾತ್ರ ಕಲೆ ಉಳಿದೀತು. ನಮ್ಮ ಸಾಂಸ್ಕೃತಿಕ ಮನಸ್ಸಿನ ವಿಕಾಸಕ್ಕೆ ಸಂಗೀತ ಹೆಚ್ಚು ಫಲಕಾರಿ. ಹಾನಗಲ್ಲು ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಅದು ಮುಂದುವರೆಯಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಡಾ. ಶಾಂತಾರಾಮ ಹೆಗಡೆ, ಗುರು ಪರಂಪರೆಯನ್ನು ಸ್ಮರಿಸುವ, ಆರಾಧಿಸುವ ಸಂಪ್ರದಾಯ ನಮ್ಮ ಸಂಸ್ಕೃತಿಯಾಗಿದೆ. ಎಲ್ಲ ಕಾಲಕ್ಕೂ ಸಂಗೀತ ಒಂದು ಶಕ್ತಿ ಮಾಧ್ಯಮವಾಗಿ ಎಲ್ಲರ ಮನಸ್ಸನ್ನು ಅರಳಿಸುವ ಶಕ್ತಿ ಸಾಧನವೂ ಆಗಿದೆ. ಸಾಧನೆಗೆ ಕಾಲದ ಮಿತಿ ಇಲ್ಲ. ಸಾಧಕ ನಿತ್ಯವೂ ವಿದ್ಯಾರ್ಥಿಯೇ. ಹೊಸದನ್ನು ಅರಿತು ಅರಳಿಸಿ, ಸಮಾಜಕ್ಕೆ ತನ್ನ ಪ್ರತಿಭೆಯ ಮೂಲಕ ನೀಡುವ ಪ್ರಕ್ರಿಯೆಯ ಹಿಂದೆ ದೊಡ್ಡ ಸಾಧನೆಯೇ ಇದೆ. ಸಾಧಕನ ಪ್ರತಿಭೆಗೆ ಬೆಲೆ ಕಟ್ಟಲಾಗದು. ಕಲಾ ಸರಸ್ವತಿಯ ನಿಜವಾದ ಪೂಜೆ ಎಂದರೆ ಅದು ಸಂಗೀತವನ್ನು ಪ್ರೀತಿಸುವುದು ಎಂದರು.ಹಿರಿಯ ಅಭಿಯಂತರ ಬಿ.ವೈ. ಬಂಡಿವಡ್ಡರ, ಉದಯ ನಾಸಿಕ, ಶಂಕ್ರಣ್ಣ ಗುರಪ್ಪನವರ, ಪ್ರಭು ಗುರಪ್ಪನವರ, ನಾಗರಾಜ ಧಾರೇಶ್ವರ, ಗಂಗಾ ಕೋಮಾರ, ಡಾ.ಎಂ. ಪ್ರಸನ್ನಕುಮಾರ, ನರಸಿಂಹ ಕೋಮಾರ ಅತಿಥಿಗಳಾಗಿದ್ದರು. ನಾದೋಪಾಸಕ ತ್ರಯರಾದ ವಿದ್ವಾನ್ ಭೀಮಾಶಂಕರ ಬಿದನೂರ ಮೈಸೂರು, ಡಾ.ಶಾಂತಾರಾಮ ಹೆಗಡೆ ಧಾರವಾಡ, ವಿದ್ವಾನ್ ದತ್ತಾತ್ರಯ ಚಿಟ್ಟಿಪಾಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ವಿದ್ಯಾನ್ ವಿವೇಕ ಹೆಗಡೆ ಧಾರವಾಡ, ವಿದ್ವಾನ್ ದತ್ತಾತ್ರೆಯ ಗಾಂವಕರ ಯಲ್ಲಾಪುರ, ಶ್ರೀಧರ ಗಾಂವಕರ, ಜಯಂತಿ ಗಾಂವಕರ, ಶ್ರವಣಕುಮಾರ ಕುಲಕರ್ಣಿ, ಪ್ರಫುಲ್ಲಕುಮಾರ ಹೆಬ್ಬಾರ ಯಲ್ಲಾಪುರ, ಭೀಮಾಶಂಕರ ಬಿದನೂರ ಮೈಸೂರು, ಪ್ರಸಾದ ಕೋಮಾರ, ವಿದ್ವಾನ ಪ್ರಕಾಶ ಹೆಗಡೆ ಸಿರಸಿ ಅವರಿಂದ ದಿನವಿಡೀ ಸಂಗೀತ ಕಾರ್ಯಕ್ರಮಗಳು ಮನಸೂರೆಗೊಂಡವು. ಕುಮಾರಿ ಅಂಬಿಕಾ, ಲಕ್ಷ್ಮಿ, ಪ್ರತೀಕ್ಷಾ ಕೋಮಾರ ಸೇರಿದಂತೆ ೩೫ ವಿದ್ಯಾರ್ಥಿಗಳಿಂದಲೂ ಸಂಗೀತ ಪ್ರಸ್ತುತಿ ನಡೆಯಿತು.