ಕನ್ನಡಪ್ರಭ ವಾರ್ತೆ ತುಮಕೂರುಕಾರ್ಗಿಲ್ 25ನೇ ವಿಜಯೋತ್ಸವ ಆಚರಣೆ ಹಿನ್ನೆಲೆ ನಗರದ ಅಮಾನಿಕೆರೆಯಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸುವ ಕಾರ್ಯಕ್ರಮದ ಸಂಬಂಧ ಮುರುಳೀಧರ ಹಾಲಪ್ಪ, ಟೂಡಾ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.ನಗರದ ಅಮಾನಿಕೆರೆಯ ಧ್ವಜಸ್ತಂಭ ಮತ್ತು ಹುತಾತ್ಮರ ಸ್ಮಾರಕದ ಬಳಿ ಜುಲೈ 25ರಂದು ವಿವಿಧ ಕಾರ್ಯಕ್ರಮಗಳನ್ನು ಅಮಾನಿಕೆರೆಯ ಧ್ವಜ ಸ್ತಂಭ ಮತ್ತು ಹುತಾತ್ಮರ ಸ್ಮಾರಕದ ಬಳಿ ಎನ್.ಸಿ.ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ಟೂಡಾ ಆಯುಕ್ತ ಡಾ.ಬಸಂತಿ, ಹಿರಿಯ ಅಧಿಕಾರಿಗಳೊಂದಿಗೆ ಮುರುಳೀಧರ ಹಾಲಪ್ಪ ಸ್ಥಳ ವೀಕ್ಷಿಸಿದರು.ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಎನ್.ಸಿ.ಸಿ.ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ಯುದ್ದದ 25ನೇ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಹಿಂದಿನ ಉದ್ದೇಶ ತುಮಕೂರು ಜಿಲ್ಲೆಯ ಯುವಜನರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವುದು, ನ್ಯಾಷನಲ್ ಡಿಫೇನ್ಸ್ ಅಕಾಡೆಮಿ ಕುರಿತು ಮಾಹಿತಿ ನೀಡುವುದು, ಆ ಮೂಲಕ ಯುವಜನರನ್ನು ಸೇನೆಯತ್ತ ಸೆಳೆಯುವುದಾಗಿದೆ. ಮುಂದಿನ ಒಂದು ವರ್ಷದಲ್ಲಿ ಕನಿಷ್ಠ ತುಮಕೂರು ಜಿಲ್ಲೆಯ 1 ಸಾವಿರ ಮಂದಿ ಸೇನೆ ಸೇರುವಂತೆ ಮಾಡಬೇಕೆಂಬ ಬಯಕೆ ಇದೆ. ಯುವ ಜನರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಜುಲೈ 25ರಂದು ಎನ್.ಸಿ.ಸಿ.ಯ ಕೆಡೆಟ್ಗಳು ಗಣರಾಜೋತ್ಸವ ಪೆರೇಡ್ನಲ್ಲಿ ಪ್ರದರ್ಶಿಸಿದ ಕಾರ್ಗಿಲ್ ಯುದ್ದದ ಅಣುಕು ಪ್ರದರ್ಶನವನ್ನು ಪ್ರದರ್ಶಿಸಲಿದ್ದಾರೆ. ಅದು ಹುತ್ಮಾತ್ಮರ ಸ್ಮಾರಕದ ಬಳಿ ನಡೆಯುವುದರಿಂದ ಈ ಭಾಗದಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆಗೆಸಿ ಸ್ವಚ್ಛವಾಗಿರಿಸಲು ಟೂಡಾ ಅಧಿಕಾರಿಗಳಿಗೆ ಕೋರಿದ್ದೇವೆ. ಅವರು ಸಹ ನಮ್ಮೊಂದಿಗೆ ಆಗಮಿಸಿ, ವೀಕ್ಷಿಸಿದ್ದು, ಸ್ವಚ್ಛಗೊಳಿಸುವ ಭರವಸೆ ನೀಡಿದ್ದಾರೆ. ಇದೊಂದು ಯುವಜನರ ಮನಸ್ಸಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಬೇಕೆಂಬುದು ನಮ್ಮ ಮನದಾಳದ ಇಚ್ಛೆಯಾಗಿದೆ ಎಂದು ಹೇಳಿದರು.
ಟೂಡಾ ಆಯುಕ್ತ ಡಾ.ಬಸಂತಿ ಮಾತನಾಡಿ, ಎನ್.ಸಿ.ಸಿ.ಅಧಿಕಾರಿ ಮತ್ತು ಹಾಲಪ್ಪ ಪ್ರತಿಷ್ಠಾನದ ಕೋರಿಕೆಯಂತೆ ಈ ಜಾಗದಲ್ಲಿ 600-700 ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲಾ ಸಿದ್ದತೆಗಳನ್ನು ಟೂಡಾ ಮಾಡಿಕೊಡಲಿದೆ ಎಂದರು.ಮುಖಂಡರಾದ ನರಸೇಗೌಡ, ರೇವಣ್ಣಸಿದ್ದಯ್ಯ, ಪೃಥ್ವಿ ಹಾಲಪ್ಪ, ನಿಸಾರ್ ಅಹಮದ್, ಆನಂದ್, ರಾಮಮೂರ್ತಿ ಗೌಡ, ಪ್ರವೀಣ್ಗೌಡ ಮತ್ತಿತರರು ಉಪಸ್ಥಿತರಿದ್ದರು.