ನಗರದಲ್ಲಿ ಈವರೆಗೆ 500 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿನ ಎರಡೂ ಬದಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಈವರೆಗೆ 500 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿನ ಎರಡೂ ಬದಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಚಾರಿ ಮಾರ್ಗಗಳಲ್ಲಿ ಇದ್ದ ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲ ಮಾದರಿಯ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ತೆರವು ಮಾಡುವಾಗ ಹಾಳಾಗಿರುವ ಪಾದಚಾರಿ ಮಾರ್ಗಗಳ ದುರಸ್ತಿ ಮಾಡುವ ಕೆಲಸವನ್ನೂ ಆರಂಭಿಸಲಾಗಿದೆ. ಕೆಲವು ಕಡೆ ಸ್ಲ್ಯಾಬ್ಗಳು ಮುರಿದು ಹೋಗಿವೆ. ಅವುಗಳನ್ನು ಕೂಡ ಬದಲಿಸಿ ಸರಿಪಡಿಸುವ ಕೆಲಸ ನಡೆದಿದೆ ಎಂದರು.
ಒತ್ತುವರಿ ತೆರವು ಮಾಡಿದ ಸ್ಥಳಗಳಲ್ಲಿ ಮತ್ತೆ ಒತ್ತುವರಿ ಮಾಡಿರುವುದು ಕಂಡು ಬಂದರೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ವ್ಯಾಪಾರಿಗಳಿಂದ ಆಗುತ್ತಿರುವ ಒತ್ತುವರಿಯನ್ನು ತೆರವುಗೊಳಿಸಬೇಕು ಎಂಬ ದೂರುಗಳಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಉತ್ತರ ಪಾಲಿಕೆಯಿಂದ ಒತ್ತುವರಿ ತೆರವು:
ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿನ 8.60 ಕಿ.ಮೀ ವ್ಯಾಪ್ತಿಯಲ್ಲಿನ ಫುಟ್ಪಾತ್ ಒತ್ತುವರಿ ತೆರವು ಮಾಡಲಾಗಿದೆ. ಬೆಳ್ಳಹಳ್ಳಿ ಜಂಕ್ಷನ್ನಿಂದ ನಯರಾ ಪೆಟ್ರೋಲ್ ಬಂಕ್ವರೆಗಿನ ಕೋಗಿಲು ಮುಖ್ಯರಸ್ತೆಯಲ್ಲಿ ಸುಮಾರು 3 ಕಿ.ಮೀ., ಟ್ಯಾನರಿ ರಸ್ತೆಯಲ್ಲಿ ದೊಡ್ಡಿ ವೃತ್ತದಿಂದ ಪೆರಿಯಾರ್ ವೃತ್ತದವರೆಗೆ ಸುಮಾರು 1 ಕಿ.ಮೀ., ಸರ್ವಜ್ಞನಗರ ವಿಭಾಗದಲ್ಲಿ 5ನೇ ಕ್ರಾಸ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ನಿಂದ ಕೆಪಿಟಿಸಿಎಲ್ 10ನೇ ಮುಖ್ಯ ರಸ್ತೆಯವರೆಗೆ ಸುಮಾರು 800 ಮೀ.ರಸ್ತೆ, ಕೋಗಿಲು ಕ್ರಾಸ್ ಮುಖ್ಯರಸ್ತೆಯಲ್ಲಿ ಸುಮಾರು 3 ಕಿ.ಮೀ., ಕಿರ್ಲೋಸ್ಕರ್ ಲೇಔಟ್ನಲ್ಲಿ 800 ಮೀ.ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
8 ಅಂಗಡಿಗಳು, 8 ತಳ್ಳುವ ಗಾಡಿಗಳು, 92 ಮೇಲ್ಛಾವಣಿ, 98 ಮೆಟ್ಟಿಲುಗಳು, 83 ಜಾಹೀರಾತು ಫಲಕದ ಜೊತೆಗೆ 115.5 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.