ಒಳಮೀಸಲಾತಿ ತೀರ್ಪನ್ನು ಜಾರಿಗೊಳಿಸಿ

KannadaprabhaNewsNetwork | Published : Sep 10, 2024 1:36 AM

ಒಳಮೀಸಲಾತಿ ತೀರ್ಪನ್ನು ಜಾರಿಗೊಳಿಸಿ

ಕನ್ನಡಪ್ರಭ ವಾರ್ತೆ ತುಮಕೂರುಸುಪ್ರಿಂಕೋರ್ಟ್‌ ನೀಡಿರುವ ಒಳಮೀಸಲಾತಿ ತೀರ್ಪನ್ನು ಯಥಾವತ್ತು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿಯನ್ನು ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.ಪತ್ರಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಸುಮಾರು 3 ದಶಕಗಳ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪಾಲು ಹಂಚಿಕೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ನೀಡಿ ಸುಪ್ರಿಂಕೋರ್ಟು ತೀರ್ಪು ನೀಡಿದೆ. ಸದರಿ ತೀರ್ಪು ಬಂದು ತಿಂಗಳು ಕಳೆದರೂ ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಕಾಂಗ್ರೆಸ್ ಸರಕಾರ ಇದುವರೆಗೂ ಜಾರಿಗೆ ತಂದಿಲ್ಲ. ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ನಾಟಕವಾಡುತ್ತಿದ್ದಾರೆ ಎಂಬುದು ನಮ್ಮ ಆರೋಪವಾಗಿದೆ. ಕೂಡಲೇ ಸರಕಾರ ಸುಪ್ರಿಂಕೋರ್ಟ್‌ ತೀರ್ಪನ್ನು ಜಾರಿಗೆ ತರಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.ಒಳಮೀಸಲಾತಿ ಕುರಿತು ಸುಪ್ರಿಂಕೋರ್ಟಿನ ತೀರ್ಪನ್ನು ಹಲವಾರು ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಅಲ್ಲದೆ ದಲಿತ, ಪ್ರಗತಿಪರ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿವೆ.ಆದರೆ ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾತ್ರ ಕೆನೆಪದರದ ನೆಪ ಹೇಳಿಕೊಂಡು ತೀರ್ಪು ಜಾರಿಗೆ ಮೀನಾಮೇಷ ಎಣಿಸುತ್ತಿದೆ. ಸರಕಾರದ ನಡೆ ನಿಜಕ್ಕೂ ಖಂಡನೀಯ ಎಂದರು.ಚುನಾವಣೆ ಪೂರ್ವದಲ್ಲಿ ತಮ್ಮ ಪ್ರಾಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ, ಸುಪ್ರಿಂಕೋರ್ಟಿನ ತೀರ್ಪು ಬಂದ ನಂತರವೂ ಜಾರಿಗೊಳಿಸದೆ ಇರುವುದು ಇವರ ಇಬ್ಬಂದಿತನವನ್ನು ತೋರಿಸುತ್ತದೆ. ಕೇಂದ್ರ ಸರಕಾರ ಸಹ ಒಳಮೀಸಲಾತಿಗೆ ಕೆನೆಪದರ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ರಾಜ್ಯ ಸರಕಾರದ ಗೋಸುಂಬೆತನಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಿದ ರೀತಿಯಲ್ಲಿಯೇ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಬುದ್ದಿ ಕಲಿಸಲಿದ್ದಾರೆ ಎಂದು ಪಿ.ಎನ್.ರಾಮಯ್ಯ ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಂವಿಧಾನ ಉಳಿವು ಸಾಧ್ಯ ಎಂದು ಬೊಬ್ಬೆ ಹೊಡೆಯು ಕಾಂಗ್ರೆಸಿಗರಿಗೆ ತೀರ್ಪು ಬಂದ ಒಂದು ತಿಂಗಳು ಕಳೆದರೂ ಜಾರಿಗೊಳಿಸಿದಿರುವುದು ಪಕ್ಷದ ಶಾಸಕರು, ಸಂಸದರ ಕಣ್ಣಿಗೆ ಕಾಣುತ್ತಿಲ್ಲವೇ,ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ವರ್ಗೀಕರಣ ತೀರ್ಪು ಜಾರಿಗೆ ತರಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸದ ಜಿಲ್ಲಾ ಉಪಾಧ್ಯಕ್ಷ ಹಟ್ಟಯ್ಯ, ಜಿಲ್ಲಾ ಸಂಘಟನಾ ಅಧ್ಯಕ್ಷರಾದ ಪುಟ್ಟಸ್ವಾಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಮ್ಮ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ನರಸೀಯಪ್ಪ, ಸುನೀಲ್, ಚಿಣ್ಣನಹಳ್ಳಿರಾಜು, ಮಂಜುನಾಥ್, ಚಂದ್ರಶೇಖರ್.ಡಿ, ಮಂಜುನಾಥ್ ಚಿಕ್ಕತೊಟ್ಲುಕೆರೆ, ದಲಿತ ಗಂಗಣ್ಣ, ಎ.ರಂಜನ್,ಆಟೋ ಶಿವರಾಜು, ನರಸಿಂಹಮೂರ್ತಿ ಚೇಳೂರು, ಸಿದ್ದೀಕ್, ಪರ್ವೇಜ್, ಮುಬಾರಕ್ ಸಮೀರ್, ಅಫೀದ್ ಸೇರಿದಂತೆ ಹಲವರು ಭಾಗವಹಿಸಿದ್ದರು.