ಶ್ರೀಮಂತಿಕೆ ಇದ್ದಾಗಲೇ ಸಮಾಜಕ್ಕೆ ದಾನ ಧರ್ಮ ಮಾಡಿರಿ

KannadaprabhaNewsNetwork |  
Published : Aug 05, 2026, 02:00 AM IST
 3 ಟಿವಿಕೆ 3 - ತುರುವೇಕೆರೆಯ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನಿಗೆ ಶ್ರೀಮಂತಿಕೆ ಶಾಶ್ವತ ಅಲ್ಲ. ಶ್ರೀಮಂತಿಕೆ ಇದ್ದಾಗ ಮಾಡಿದ ದಾನ ಧರ್ಮಗಳು ಮಾತ್ರ ಜೀವನ ಪರ್ಯಂತ ಉಳಿಯಲಿವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಮನುಷ್ಯನಿಗೆ ಶ್ರೀಮಂತಿಕೆ ಶಾಶ್ವತ ಅಲ್ಲ. ಶ್ರೀಮಂತಿಕೆ ಇದ್ದಾಗ ಮಾಡಿದ ದಾನ ಧರ್ಮಗಳು ಮಾತ್ರ ಜೀವನ ಪರ್ಯಂತ ಉಳಿಯಲಿವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ತಿಳಿಸಿದರು.

ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಮಂತಿಕೆ ಎಂಬುದು ದೇವರಿಂದಲೂ ದೂರ. ಈ ಹಿಂದೆ ಅಗರ್ಭ ಶ್ರೀಮಂತಿಕೆ ಇದ್ದವರು ಈಗ ಬಡವರಾಗಿದ್ದಾರೆ. ದೇವರಿಗೆ ಚಿನ್ನದ ಕಿರೀಟ ನೀಡಿದವರಿಗೆ ಯಾವ ಸ್ಥಿತಿ ಬಂತು ಎಂದು ನೋಡಿದ್ದೇವೆ. ಆದ್ದರಿಂದ ಶ್ರೀಮಂತಿಕೆ ಇದ್ದಾಗ ಬಹಳ ಎಚ್ಚರಿಕೆಯಿಂದ ನಡೆಯುವುದು ಸೂಕ್ತ. ಬಡವರಿಗೆ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡುವಂತಹ ಗುಣ ಬೆಳಸಿಕೊಳ್ಳಬೇಕು ಎಂದರು.ಲಿಂಗಾಯತ ಧರ್ಮ ಎಲ್ಲಾ ಸಮಾಜದವರ ಜೊತೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ. ಕೆಳವರ್ಗದ ಜನರನ್ನು ಆತ್ಮೀಯತೆಯಿಂದ ಕಾಣುವುದು ಲಿಂಗಾಯತ ಸಮುದಾಯವಾಗಿದೆ. ನಾವುಗಳು ಜಾತಿ ಮತ, ಧರ್ಮ ಮಾಡಿಕೊಂಡಿದ್ದೇವೆ. ಜಗತ್ತಿನಲ್ಲಿ ಎಲ್ಲ ಶಿವಮಯ, ಲಿಂಗಮಯ. ಉತ್ತಮ ನಡೆತೆ, ದೇವರಲ್ಲಿ ಭಕ್ತಿ ಭಾವನೆ ಪಾಲಿಸುವನು ಯಾವುದೇ ಜಾತಿಯಾಗಿದ್ದರು ಆತ ಲಿಂಗವಂತನಾಗುತ್ತಾನೆ. ವೀರಶೈವ. ಲಿಂಗಾಯತ ಒಳ ಪಂಗಡಗಳು ಅಳಿದು ಹೋಗುತ್ತಿದೆ. ಎಲ್ಲ ಲಿಂಗಾಯತರು ಒಳಪಂಗಡಗಳಲ್ಲಿ ಹೆಣ್ಣು ಗಂಡು ಕೊಟ್ಟು ತಂದು ಮಾವ ಭಾಮೈದ, ಅಣ್ಣ ತಮ್ಮಂದಿರಾಗಿ ಸಂಬಂಧಗಳು ಬೆಸೆದುಕೊಂಡಿವೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೌಂಟ್ ಎವರೆಸ್ಟ್ ಏರಿದ ಸಾಧಕಿ ಅಮ್ಮಸಂದ್ರದ ಚಿನ್ಮಯಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸ, ಅಂಕಗಳಿಕೆಗೆ ಒತ್ತಡ ಹೇರಬೇಡಿ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಒತ್ತು ನೀಡುವಂತೆ ಪ್ರೋತ್ಸಾಹಿಸಿ. ನಾನು ವಿದ್ಯಾಭ್ಯಾಸ ಮಾಡಿದ ಸಂದರ್ಭದಲ್ಲಿ ಟಾಪರ್ ಆಗಿದ್ದೆ. ವಿದ್ಯೆ ಜೊತೆ ಕ್ರೀಡೆಗೂ ಹೆಚ್ಚು ಒತ್ತು ನೀಡಿದ್ದೆ. ನಾನು ವೃತ್ತಿಯಲ್ಲಿ ವೈದ್ಯ ಆಗಿದ್ದರೂ ಸಹ ಕ್ರೀಡಾಭಿಮಾನ ಬಿಡದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದೆ. ಹಾಗಾಗಿ ಮಕ್ಕಳು ಸಾಧನೆಯ ಕನಸ್ಸು ಕಾಣಬೇಕು. ಏನನ್ನಾದರೂ ಸಾಧನೆ ಮಾಡಬೇಕು ಎಂದರು.

ಸಂಘದ ತಾಲೂಕು ಅಧ್ಯಕ್ಷ ಪರಶಿವಮೂರ್ತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯಿತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್, ಮುಖಂಡರಾದ ವೀರೇಂದ್ರ ಪಾಟೀಲ್, ವೆಂಕಾಟಪುರ ಯೋಗೀಶ್, ದೇವರಾಜು, ತೀರ್ಥಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ಯಡಗಿಹಳ್ಳಿ ವಿಶ್ವನಾಥ್. ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾಸುರೇಶ್, ಮಂಜುಳಾ ಉಮಮಹೇಶ್, ದೀಪು ಶಾಲೆ ಮುಖ್ಯ ಶಿಕ್ಷಕ ನಟೇಶ್, ಶಿಕ್ಷಕ ಲೋಕೇಶ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಹಿಟ್ನಾಳಗೆ ಸಚಿವ ಸ್ಥಾನ ತಪ್ಪಿದ್ಯಾಕೆ ?
ಟಗರು, ಕುರಿ ಕಳ್ಳತನ, ಇಬ್ಬರು ಯುವಕರ ಬಂಧನ