ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನೂರಾರು ಐಟಿ ನೌಕರರು ಭಾಗವಹಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಅವರು, ರಾಜ್ಯ ಸರ್ಕಾರ ಕರ್ನಾಟಕ ಶಾಪ್ಸ್ ಆ್ಯಂಡ್ ಎಶ್ಟಾಬ್ಲಿಷ್ಮೆಂಟ್ ಕಾಯಿದೆಗೆ ತಿದ್ದುಪಡಿ ತಂದು ಐಟಿ ಆಧಾರಿತ ಸೇವೆಗಳು ಹಾಗೂ ಬಿಪಿಒಗಳ ಕೆಲಸದ ಅವಧಿ 12ರಿಂದ 14 ತಾಸುಗಳಿಗೆ ಹೆಚ್ಚಿಸುವ ಪ್ರಸ್ತಾವ ಇಟ್ಟುಕೊಂಡಿದೆ. ಈ ನಿಯಮಗಳಿಂದ ಐಟಿ ವಲಯದ ಶೇ.45 ರಷ್ಟು ಉದ್ಯೋಗಿಗಳು ಮಾನಸಿಕ ಒತ್ತಡಕ್ಕೆ ಹಾಗೂ ಶೇ.55ರಷ್ಟು ಉದ್ಯೋಗಿಗಳು ದೈಹಿಕ ಸಮಸ್ಯೆಗೆ ಒಳಗಾಗುತ್ತಾರೆ. ಹದಿನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವುದು ಅಸಾಧ್ಯ. ಇದು ಅವರ ವೃತ್ತಿ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಲ್ಲದೇ, ಉದ್ಯೋಗಿಗಳು ಯಂತ್ರಗಳಂತೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ಸರ್ಕಾರ ಈ ಕೂಡಲೇ ತನ್ನ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕೆಐಟಿಯು ಉಪಾಧ್ಯಕ್ಷೆ ರಶ್ಮಿ ಚೌಧರಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.