)
ಕನ್ನಡಪ್ರವಾರ್ತೆ, ಚಿಂತಾಮಣಿ:
ನಗರದ ಹೊರವಲಯದ ಚಿನ್ನಸಂದ್ರದ ಬಳಿಯಿರುವ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿದ್ದ ಯುವಕ ಮೈಸೂರು ನಗರ ಹೆಬ್ಬಾಳದ ರಾಕೇಶ್ (20 ವರ್ಷ) ಗುರುತಿಸಿದ್ದು ಈತ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೊರವಲಯದ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿರುವ ಶ್ರೀದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದನು.
ಶನಿವಾರ ರಾತ್ರಿ ಊಟ ಮಾಡಿ ಮಲಗಿದ ನಂತರ ವಿದ್ಯಾರ್ಥಿನಿಲಯದಿಂದ ಹೊರಗಡೆ ಹೋಗಿ ಹಿಂಭಾಗದಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಯಾವ ಕಾರಣಕ್ಕಾಗಿ ನೇಣು ಹಾಕಿಕೊಂಡಿದ್ದಾನೆಂದು ತಿಳಿಯದಾಗಿದೆ. ವಿದ್ಯಾರ್ಥಿಗಳು ಎಂದಿನಂತೆ ಭಾನುವಾರ ಕಾಲೇಜಿಗೆ ರಜೆ ಇದ್ದುದರಿಂದ ಕ್ರಿಕೆಟ್ ಆಡಲು ವಿದ್ಯಾರ್ಥಿನಿಲಯದ ಹಿಂಭಾಗಕ್ಕೆ ಮೈದಾನಕ್ಕೆ ಹೋದಾಗ ಮರದಲ್ಲಿ ಶವ ನೇತಾಡುತ್ತಿರುವುದನ್ನು ಕಂಡು ವಾರ್ಡನ್ ಮೆಹಬೂಬ್ ಪಾಷಾಗೆ ಮಾಹಿತಿ ನೀಡಿದ್ದಾರೆ. ವಾರ್ಡನ್ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿದ್ಯಾರ್ಥಿಯ ಸ್ನೇಹಿತರು ಮತ್ತು ಕಾಲೇಜು ಕಡೆಯಿಂದಲೂ ವಿಚಾರಣೆ ಮಾಡಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.