ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮಾ ವೃತ್ತದಿಂದ ಬೃಹತ್ ಜನಜಾಗೃತಿ ಪ್ರತಿಭಟನಾ ಮೆರವಣಿಗೆ ಮೂಲಕ ಕನ್ನಡ ಇಲ್ಲದ ಆಂಗ್ಲ ಭಾಷೆಯ ನಾಮಫಲಕಗಳ ತೆರುವು ಕಾರ್ಯ ನಡೆಸಿದರು. ನೂರಾರು ಕರವೇ ಕಾರ್ಯಕರ್ತರು ಘೋಷಣೆ ಕೂಗಿದರು.
ಆಂಗ್ಲ ಭಾಷೆಯ ನಾಮಫಲಕಗಳಿಗೆ ಮಸಿ ಬಳೆದು ಹರಿದು ಹಾಕುತ್ತಿದ್ದಂತೆ ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಯುನಿಯನ್ ಬ್ಯಾಂಕ್ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು. ಇಲ್ಲದಿದ್ದರೇ ರಾಜೀನಾಮೆ ನೀಡಿ ಹೋಗಬೇಕೆಂದು ಆಗ್ರಹಿಸಿ ನಾಮಫಲಕಗಳನ್ನು ಹರಿದು ಹಾಕಲಾಯಿತು.ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ತಾಲೂಕಾಧ್ಯಕ್ಷ ರಾಜು ಬೋಳಣ್ಣವರ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಬರುವಂತಹ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಸರಕಾರದ ಆದೇಶದನ್ವಯ ಶೇ.60 ರಷ್ಟು ಕನ್ನಡ ಭಾಷೆಯನ್ನು ಬಳಸಲು ಕಡ್ಡಾಯಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪದಾಧಿಕಾರಿಗಳು ಅಂಗಡಿ ಮಾಲೀಕರಲ್ಲಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಒಂದು ವಾರಗಳ ಕಾಲ ಗಡುವು ನೀಡಿದರೂ ಸಂಬಂಧವಿಲ್ಲದಂತೆ ವರ್ತಿಸಿದ ಅಂಗಡಿಕಾರರ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಮಲ್ಲಿಕಾರ್ಜುನ ಬಾಜಿ, ಅಭಿಷೇಕ ಕಲಾಲ, ಸಿದ್ದಾರೂಢ ಹೊಂಡಪ್ಪನ್ನವರ, ಅಭಿಷೇಕ ಹಡಪದ, ಸೋಯೇಬ ಸಂಗೊಳ್ಳಿ, ಫಕ್ರುಸಾಬ ಕುಸಲಾಪೂರ, ಸಲ್ಮಾನ ಗಗ್ಗರಿ, ಆನಂದ ಹೊಂಗಲ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.