ಪಾರಂಪರಿಕ ಪಾತ್ರೆಗಳಿಂದ ನೀರಿನ ಗುಣವೃದ್ಧಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 14, 2026, 02:45 AM IST
ಶಾಸಕ ಶಿವರಾಮ ಹೆಬ್ಬಾರ ಶ್ರೀಗಳಿಂದ ಆರ್ಶೀವಾದ ಪಡೆಯುತ್ತಿರುವುದು  | Kannada Prabha

ಸಾರಾಂಶ

ಆಧುನಿಕ ವಿಜ್ಞಾನ ಆಹಾರ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಬಳಕೆಗೆ ಯೋಗ್ಯ ಎಂದು ಹೇಳುತ್ತಿದೆಯಾದರೂ, ಬದಲಾಗುವ ಇಂದಿನ ವಿಜ್ಞಾನ ಕೆಲವು ವರ್ಷಗಳ ನಂತರ ಇದು ಅಯೋಗ್ಯ ಎಂದು ಹೇಳಬಹುದು.

ಗೋಕರ್ಣ: ಚಿನ್ನದ ಮಾಯಾ ಚಿಂಕೆಯಂತಿರುವ ಹೊಳೆಯುವ ಪಾತ್ರೆಗಳ ಹಿಂದೆ ನಾವಿಂದು ಹೋಗುತ್ತಿದ್ದೇವೆ. ಪಾತ್ರೆಗಳು ಕೇವಲ ನೀರನ್ನು ಶೇಖರಿಸುವ ಸಾಧನವಲ್ಲ. ಪಾತ್ರೆಗಳ ಆಧಾರದ ಮೇಲೆ ಅವುಗಳ ಗುಣಾವಗುಣಗಳು ನೀರಿನಲ್ಲೂ ಸೇರಿಕೊಳ್ಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಭಾನುವಾರ ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ನೀರಿನ ಪಾತ್ರೆಗಳ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಪಾರಂಪರಿಕ ಪಾತ್ರೆಗಳು ಕೇವಲ ಪದಾರ್ಥಗಳನ್ನು ಹಿಡಿದಿಡುವುದಿಲ್ಲ. ಅದು ಗುಣವೃದ್ಧಿಗೂ ಕಾರಣವಾಗುತ್ತದೆ ಎಂದರು.

ಚಿನ್ನ ತನ್ನಲ್ಲಿರುವ ಪದಾರ್ಥಗಳ ಗುಣವನ್ನು ವೃದ್ಧಿಸುವುದರಿಂದಲೇ ಚಿನ್ನಕ್ಕೆ ಪಾರಂಪರಿಕವಾಗಿ ಹೆಚ್ಚಿನ ಬೆಲೆಯಿದೆ. ಚಿನ್ನ , ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳು ನೀರಿನ ಗುಣವನ್ನು ವೃದ್ಧಿಸಿದರೆ, ಗಾಜು ಗುಣವೃದ್ಧಿ ಮಾಡದೇ ಇದ್ದರೂ ಅದು ಗುಣಹಾನಿಯನ್ನು ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಸರ್ವದಾ ಬಳಕೆಗೆ ಅಯೋಗ್ಯ ಎಂದು ಹೇಳಿದರು.

ನಮ್ಮ ಪ್ರಾಚೀನ ಮಹರ್ಷಿಗಳ ಕಾಲದಲ್ಲಿ ಪ್ಲಾಸ್ಟಿಕ್ ಹಾಗೂ ಸ್ಟೇನ್ಲೆಸ್ ಸ್ಟೀಲ್ ಗಳು ಇರಲಿಲ್ಲ. ಹಾಗಾಗಿ ಆ ಬಗ್ಗೆ ವಿವರಗಳು ಪ್ರಾಚೀನ ಗ್ರಂಥಗಳಲ್ಲಿ ಸಿಗುವುದಿಲ್ಲ. ಆದರೆ ನಾಡಿ ವಿಜ್ಞಾನದಲ್ಲಿ ಅಪರಿಮಿತ ಸಿದ್ಧಿಯನ್ನು ಹೊಂದಿದ್ದ ಶ್ರೀರಂಗ ಮಹಾಗುರುಗಳು ಬೇರೆಬೇರೆ ಪಾತ್ರೆಗಳಲ್ಲಿ ಹಾಲನ್ನು ಹಾಕಿದಾಗ ಅದರಿಂದಾಗುವ ಪರಿಣಾಮಗಳ ಕುರಿತಾಗಿ ಪ್ರಯೋಗಾತ್ಮಕವಾದ ಸಂಶೋಧನೆಯನ್ನು ನಡೆಸಿದ್ದು, ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸಿದಾಗ ಅದು ದೇಹದ ವಾತ- ಪಿತ್ತ- ಕಫದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ದಾಖಲಿಸಿದ್ದಾರೆ.

ಆಧುನಿಕ ವಿಜ್ಞಾನ ಆಹಾರ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಬಳಕೆಗೆ ಯೋಗ್ಯ ಎಂದು ಹೇಳುತ್ತಿದೆಯಾದರೂ, ಬದಲಾಗುವ ಇಂದಿನ ವಿಜ್ಞಾನ ಕೆಲವು ವರ್ಷಗಳ ನಂತರ ಇದು ಅಯೋಗ್ಯ ಎಂದು ಹೇಳಬಹುದು. ಆದರೆ ಅಲ್ಲಿಯವರೆಗೆ ಬಹುಮೌಲ್ಯದ ನಮ್ಮ ದೇಹವನ್ನು ಹಾಳು ಮಾಡಿಕೊಳ್ಳಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಶಿರಸಿಯ ಶಾಸಕ ಭೀಮಣ್ಣ ಟಿ ನಾಯ್ಕ್, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರು ಶ್ರೀಗಳ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಮಂಡಲದ ಪರವಾಗಿ ಕೆ.ಎಂ. ದಿವಾಕರ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಗಣಪತಿ ಪುದುಕೊಳಿ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾ ಝೋನ್ ನಿರ್ಮಾಣ: ಶಾಸಕ ಅಶೋಕ್ ರೈ
16ರಿಂದ 26ರ ವರೆಗೆ ರಾಜ್ಯಮಟ್ಟದ ತರಬೇತಿ ಶಿಬಿರ