ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧ ಮತದಾರರ ಗಣತಿ ನಮೂನೆಗಳ ವಿತರಿಸಿರುವ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಗಳ ವಿತರಣೆಯ ಕಾರ್ಯವು ಪ್ರಗತಿಯಲ್ಲಿದ್ದು, ಈಗಾಗಲೇ ಶೇ.98 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಉಳಿದಿರುವ ಶೇ.2ರಷ್ಟು ಪ್ರಕರಣಗಳಲ್ಲಿ ಮರಣ ಹೊಂದಿದವರು, ಸ್ಥಳಾಂತರಗೊಂಡವರು ಹಾಗೂ ಮನೆಗೆ ಬೀಗ ಹಾಕಿ ಬೇರೆಡೆ ವಾಸಿಸುತ್ತಿರುವವರ ವಿವರಗಳಿದ್ದು, ಇವುಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಜು.8ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ 14,40,534 ಮತದಾರರ ಪೈಕಿ ಈಗಾಗಲೇ 14,04,219 ಮತದಾರರರನ್ನು (ಶೇ.97.48) ಮ್ಯಾಪಿಂಗ್ ಮಾಡಲಾಗಿದೆ. 36,315 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದ್ದು ಇವರುಗಳ ವಿಳಾಸ ಪತ್ತೆಯಾಗುತ್ತಿಲ್ಲ. ಇವರು ಯಾರು ಮತ್ತು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಪಟ್ಟಿಯಿಂದ ತೆಗೆದುಹಾಕಲು ಅಥವಾ ಸರಿಪಡಿಸಲು ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟರುಗಳು ನಮಗೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕಿದೆ. ಮರಣ ಹೊಂದಿದವರ ಡೆತ್ ಸರ್ಟಿಫಿಕೇಟ್ ಲಭ್ಯವಿದ್ದರೆ ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಸುಲಭವಾಗುತ್ತದೆ ಎಂದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರನ್ನು ಗುರುತಿಸುವಲ್ಲಿ ಸ್ಥಳೀಯ ವಾರ್ಡ್ ಸದಸ್ಯರು, ಮಾಜಿ ಕೌನ್ಸಿಲರ್ ಗಳು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಪಾತ್ರ ದೊಡ್ಡದಾಗಿದೆ. ಪಕ್ಷಾತೀತವಾಗಿ ಇವರೆಲ್ಲರಿಗೂ ಸ್ಥಳೀಯ ಮತದಾರರ ಬಗ್ಗೆ ನಿಖರ ಮಾಹಿತಿ ಇರುತ್ತದೆ. ತಕ್ಷಣವೇ ತಹಶೀಲ್ದಾರರ, ಇಒ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ಕರೆದು ಮಹಜರು ಪ್ರಕ್ರಿಯೆಯ ಮೂಲಕ ನಿಖರ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಸೀಲ್ದಾರ್ ಬೀಬೀ ಫಾತಿಮಾ, ಕಾಂಗ್ರೆಸ್ ಪಕ್ಷದ ಎಂ.ಕೆ.ತಾಜ್ಪೀರ್, ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಬಿಜೆಪಿ ಪಕ್ಷದ ಟಿ.ಯಶವಂತ ಕುಮಾರ್, ಬಿಎಸ್ಪಿ ಪಕ್ಷದ ಪ್ರಕಾಶ್, ನಿಂಗರಾಜ್ ಇತರರು ಇದ್ದರು.