ವಿದ್ಯಾರ್ಥಿ ನಿಲಯ ನಿರ್ಮಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ

KannadaprabhaNewsNetwork |  
Published : Jul 10, 2026, 12:15 AM IST
56 | Kannada Prabha

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಗ್ರಾಮೀಣ ಭಾಗದಲ್ಲಿ ವೈಷ್ಣವ ಸಮುದಾಯದ ರೈತಾಪಿ ವರ್ಗದ ಬಡಜನರ ಮಕ್ಕಳು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಹಿಂದುಳಿದ ವರ್ಗಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರ ಆದ್ದರಿಂದ ತಾಲೂಕು ವೈಷ್ಣವ ಸಂಘಟನೆಯವರು ಸಮುದಾಯದ ವತಿಯಿಂದ ವಿದ್ಯಾರ್ಥಿ ನಿಲಯ ನಿರ್ಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಸಂಸದ ಪಿ.ಸಿ. ಮೋಹನ್ ಹೇಳಿದರು.

ಮಹದೇಶ್ವರ ಬಡಾವಣೆಯಲ್ಲಿನ ವೈಷ್ಣವ ಸಂಘದ ಕಚೇರಿ ಆವರಣದಲ್ಲಿ ವೈಷ್ಣವ ಸಂಘದ ವಿದ್ಯಾರ್ಥಿ ನಿಲಯ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ 10 ಲಕ್ಷ ದೇಣಿಗೆ ನೀಡಿ ಮಾತನಾಡಿದರು.

ಮೈಸೂರು ಮತ್ತು ಚಾಮರಾಜನಗರ ಗ್ರಾಮೀಣ ಭಾಗದಲ್ಲಿ ವೈಷ್ಣವ ಸಮುದಾಯದ ರೈತಾಪಿ ವರ್ಗದ ಬಡಜನರ ಮಕ್ಕಳು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಸಮುದಾಯದ ವತಿಯಿಂದ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು. ಆದ್ದರಿಂದ ನಾನು ನನ್ನ ವೈಯಕ್ತಿಕವಾಗಿ ಕಳೆದ ಬಾರಿ ಒಂದು ವರ್ಷದ ಹಿಂದೆ 5 ಲಕ್ಷ ರೂ. ದೇಣಿಗೆ ನೀಡಿದ್ದೆ. ಈ ಬಾರಿ ವಿದ್ಯಾರ್ಥಿನಿಲಯದ ಕಟ್ಟಡ ಪರಿಶೀಲನೆ ನಡೆಸಿ ಮತ್ತೆ 5 ಲಕ್ಷ ರೂ. ನೀಡಿದ್ದೇನೆ ಎಂದರು.

ವಿದ್ಯಾರ್ಥಿನಿಲಯದಲ್ಲಿ 100 ವಿದ್ಯಾರ್ಥಿಗಳು ಆಶ್ರಯ ಪಡೆದರು ಕೂಡ ಅದರ ಸಂಪೂರ್ಣ ಖರ್ಚು ವೆಚ್ಚವನ್ನು ನಾನೇ ಭರಿಸುತ್ತೇನೆ. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿ ಅದರ ಖರ್ಚನ್ನು ನಾನೇ ಭರಿಸುತ್ತೇನೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಅವರಿಂದ ವಿದ್ಯಾರ್ಥಿ ನಿಲಯಕ್ಕೆ 10 ಲಕ್ಷ ದೇಣಿಗೆ ಕೊಡಿಸುವ ಭರವಸೆ ನೀಡಿದರು.

ಹಿಂದುಳಿದ ವರ್ಗದವರ ಆಶಾಕಿರಣ ಬಿಎಸ್ ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವೈಷ್ಣವ ಬಲಿಜ ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತಿರುವ ಸಲುವಾಗಿ ನನ್ನ ಮನವಿಯ ಮೇರೆಗೆ 3ಎ ನಿಂದ 2ಎ ವರ್ಗಕ್ಕೆ ಸೇರ್ಪಡಿಸಿದ ಪರಿಣಾಮ ಸಮುದಾಯದ ಸಾವಿರಾರು ಬಡ ರೈತರ ಮಕ್ಕಳು ಪ್ರತಿ ವರ್ಷ ವೈದ್ಯರು ಮತ್ತು ಎಂಜಿನಿಯರ್ ಗಳಾಗಿ ಹೊರಹೊಮ್ಮುತ್ತಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮುದಾಯದ ಕೈವಾರ ತಾತಯ್ಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಣೆ ನಡೆಸಲು ಕಾರಣಿಭೂತರಾಗಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಹಿಂದುಳಿದ ವರ್ಗದ ಆಶಾಕಿರಣವಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿದ ವೇಳೆ ಹಿಂದುಳಿದ ವರ್ಗಕ್ಕೆ ನೀಡಿದ್ದ ಆಶ್ವಾಸನೆ ಈಡೇರಿಸಿಲ್ಲ. 2014 ರಲ್ಲಿ ಕಾಂತರಾಜ್ ಜಾತಿ ಗಣತಿ ಆಯೋಗ, ಮತ್ತೆ ಜಯಪ್ರಕಾಶ್, ಮಧುಸೂದನ್ ನಾಯಕ್ ನೇತೃತ್ವದ ಆಯೋಗದ ವರದಿಯನ್ನು ಅಂಗೀಕರಿಸದೆ ಕಸದ ಬುಟ್ಟಿಗೆ ಎಸೆದಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದುಳಿದ ವರ್ಗಗಳ ಬಗ್ಗೆ ಚಕಾರವನ್ನು ಎತ್ತುತ್ತಿಲ್ಲ. ಆದ್ದರಿಂದ ಮುಂಬರುವ ಅಧಿವೇಶನದಲ್ಲಿ ಹಿಂದುಳಿದ ವರ್ಗದ ಕಲ್ಯಾಣದ ಬಗ್ಗೆ ಚರ್ಚೆ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ, ಎಲ್ಲಾ ಜಾತಿ ಜನಾಂಗವನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಹಿತದೃಷ್ಟಿಯಿಂದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ಸಣ್ಣಪುಟ್ಟ ಸಮುದಾಯವನ್ನು ಗುರುತಿಸಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದ್ದಾರೆ. ಜೊತೆಗೆ ಶಾಸಕ ಪುಟ್ಟರಂಗಶೆಟ್ಟಿ ಅವರನ್ನು ಗುರುತಿಸಿ ಟಿಕೆಟ್ ನೀಡಿ ಅವರು ಶಾಸಕರಾದರು ಕಾರಣಕರ್ತರಾಗಿದ್ದಾರೆ. ನನ್ನ ಅವಧಿಯಲ್ಲಿ ಎಲ್ಲಾ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡವ ಜೊತೆಗೆ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿ ಕೊಟ್ಟಿದ್ದೇನೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನೇ ನಡೆಸಿದರು ಸಹ ಹಿಂದುಳಿದ ವರ್ಗಗಳು ಚುನಾವಣೆಯಲ್ಲಿ ನನ್ನನ್ನು ಕೈಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಕಾಂತರಾಜ್, ಪ್ರಭಾಕರ್, ವೆಂಕಟೇಶ್, ರಾಮಚಂದ್ರ, ರಾಜೇಶ್, ಸೇರಿದಂತೆ ವೈಷ್ಣವ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಡಿಕ್ಕಿಯಾಗಿ ಪೆಟ್ರೋಲ್‌ - ಹಾಲಿನ ಟ್ಯಾಂಕರ್‌ ಬೆಂಕಿಗಾಹುತಿ
ಹಾಲಿನ ಖರೀದಿ ದರ ₹10 ಹೆಚ್ಚಳಕ್ಕೆ ಆಗ್ರಹಿಸಿ ಬೀದಿಗಿಳಿದ ದೊಡ್ಡಬಳ್ಳಾಪುರ ತಾಲೂಕಿನ ರೈತರು