ಎಐ ಆತಂಕಕ್ಕೆ ಉದ್ಯಮಶೀಲತೆಯೇ ಮದ್ದು

KannadaprabhaNewsNetwork |  
Published : Aug 10, 2026, 03:15 AM IST
(ಪೋಟೋ-9ಬಿಕೆಟಿ3, ಸಂವಾದಲ್ಲಿ ಬಾಗವಹಿಸಿದ ಜನಸ್ತೋಮ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಕೃತಕ ಬುದ್ಧಿಮತ್ತೆಯು (ಎಐ) ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಉದ್ಯಮಶೀಲತೆಯ ಮನಸ್ಥಿತಿ ಬೆಳೆಸಿಕೊಳ್ಳುವುದೇ ಇದಕ್ಕೆ ಮದ್ದು. ಪರಿವರ್ತನೆ ಜಗದ ನಿಯಮ ಎನ್ನುವುದನ್ನು ನಮ್ಮ ಯುವಜನರು ಅರ್ಥಮಾಡಿಕೊಂಡು ಸಿದ್ಧರಾಗಬೇಕು ಎಂದು ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃತಕ ಬುದ್ಧಿಮತ್ತೆಯು (ಎಐ) ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಉದ್ಯಮಶೀಲತೆಯ ಮನಸ್ಥಿತಿ ಬೆಳೆಸಿಕೊಳ್ಳುವುದೇ ಇದಕ್ಕೆ ಮದ್ದು. ಪರಿವರ್ತನೆ ಜಗದ ನಿಯಮ ಎನ್ನುವುದನ್ನು ನಮ್ಮ ಯುವಜನರು ಅರ್ಥಮಾಡಿಕೊಂಡು ಸಿದ್ಧರಾಗಬೇಕು ಎಂದು ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಹೇಳಿದರು.

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಮುದ್ದೇನಹಳ್ಳಿಯ ಪ್ರಶಾಂತಿ ಬಾಲಮಂದಿರ ಟ್ರಸ್ಟ್. ಸತ್ಯಸಾಯಿ ಶರಣನಿಕೇತನಂ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ದಿವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮತ್ತು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಕೇಳಿದ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸಿದರು.

ಎಐ ನಿಂದಾಗಿ 10 ಜನರ ಕೆಲಸ ಒಬ್ಬರೇ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಾಪ್ಟವೇರ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗ ನಷ್ಟ ಆಗುತ್ತಿದೆ. ಆದರೂ ನಮ್ಮ ಯುವಜನರು ಇಂದಿಗೂ ಎಂಜಿನಿಯರ್ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಆದರೆ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಎಐ ಕಾರಣಕ್ಕೆ ಹೆಚ್ಚಿನ ಉದ್ಯೋಗ ನಷ್ಟ ಆಗುವುದಿಲ್ಲ. ನಮ್ಮ ದೇಶಕ್ಕೆ ಈಗ 10 ಲಕ್ಷ ಶಿಕ್ಷಕರು ಬೇಕು. ಎಐ ಬಳಕೆಯಲ್ಲಿ ವಿವೇಚನೆ ಇರಬೇಕು ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ಸದ್ಗುರುಗಳು ವಿವರಿಸಿದರು. ಕೆಲವರು ನನ್ನ ಡಿಜಿಟಲ್ ಅವಳಿಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಏನು ಪ್ರಯೋಜನ ಎಂದು ನಾನು ಕೇಳಿದೆ. ಸ್ವಾಮಿ, ಅದು ನಿಮ್ಮಂತೆ ಮಾತನಾಡುತ್ತೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತೆ ಎಂದರು. ಸರಿ ಹಾಗಾದರೆ, ಅದು ನನ್ನಂತೆ ಪ್ರೀತಿಸುತ್ತಾ ? ಆಶೀರ್ವಾದ ಮಾಡುತ್ತಾ ಎಂದು ಮತ್ತೆ ಕೇಳಿದೆ ಎಂದು ಅನುಭವ ಹಂಚಿಕೊಂಡರು.ಭಾರತೀಯರು ಸ್ವಭಾವತಃ ಉದ್ಯಮಶೀಲರು. ಆದರೆ, ಶಿಕ್ಷಣ ಪದ್ಧತಿಯ ದೋಷದಿಂದಾಗಿ ಗುಮಾಸ್ತರಂತೆ ಯೋಚಿಸುವ ಮನಸ್ಥಿತಿ ಬೆಳೆದಿದೆ. ನಾವು ಒಬ್ಬರ ಬಳಿ ಕೆಲಸ ಕೇಳುವ ಬದಲು ನಾವೇ ಹತ್ತು ಮಂದಿಗೆ ಕೆಲಸ ಕೊಡುವಂತೆ ಆಗಬೇಕು. ಆಗ ಎಂಥ ಪರಿಸ್ಥಿತಿ ಬಂದರೂ ನಾವು ಧೃತಿಗೆಡುವ ಸಂದರ್ಭವೇ ಬರುವುದಿಲ್ಲ ಎಂದು ತಿಳಿಸಿದರು.ನಿಸ್ವಾರ್ಥ ಪ್ರೇಮವೇ ಸದ್ಗುರುಗಳ ಅಧಿಕಾರ:ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ನಿಸ್ವಾರ್ಥ ಸೇವೆಯಿಂದ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯ ಎಂದು ಅನುಭವದ ಅಧಿಕಾರದಿಂದ ಸದ್ಗುರು ಮಧುಸೂದನ ಸಾಯಿ ಹೇಳುತ್ತಾರೆ. ಭಗವಾನ್ ಸತ್ಯ ಸಾಯಿ ಬಾಬಾ ಮಾಡಿದ ವಿಶ್ವಸೇವಾ ಕ್ರಾಂತಿಯನ್ನು ಸದ್ಗುರುಗಳು ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.ತನ್ನ ಪರಿವರ್ತನೆಯ ಕಥನ ಹಂಚಿಕೊಂಡ ಮುಧೋಳ ತಾಲೂಕು ಚಿಕ್ಕೂರು ಗ್ರಾಮದ ಶ್ರೀಸತ್ಯಸಾಯಿ ಶರಣನಿಕೇತನಂ ವಿದ್ಯಾರ್ಥಿ ಶ್ರೀಶೈಲ ಸದಾಶಿವ ದಿವಾನ, ಈ ಗುರುಕುಲವು ನನಗೆ ಪ್ರಕೃತಿ, ಶಿಸ್ತು, ಊಟ, ಪಾಠ ಕೊಟ್ಟಿದೆ. ನಾನು ಇಲ್ಲಿ ಭಗವದ್ಗೀತೆ, ಸುಭಾಷಿತ, ವೇದ ಕಲಿತೆ. ಮುಂದೆ ದೊಡ್ಡವನಾದ ಮೇಲೆ ಅಧ್ಯಾಪಕನಾಗಿ ನಮ್ಮ ಸದ್ಗುರುಗಳ ಆಶಯ ಈಡೇರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದರು.ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ, ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಬಿವಿಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ನೌಕರರು ಸಂಸ್ಥೆಗೆ ಆಸ್ತಿಯಾಗಬೇಕು,ಸಂವಾದ ಕಾರ್ಯಕ್ರಮ ನಡೆಸಿಕೊಟ್ಟ ವೀರಣ್ಣ ಚರಂತಿಮಠ ಅವರು, ನಮ್ಮಲ್ಲಿ ಕೆಲವರು ಮೂರು ತಿಂಗಳಿಗೆ ಒಮ್ಮೆ ಸಂಬಳ ಹೆಚ್ಚಿಸಬೇಕೆಂದು ಕೇಳುತ್ತಾರೆ. ಇವರಿಗೆ ಏನಾದರೂ ಉಪದೇಶ ಮಾಡಿ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದ್ಗುರು ಮಧುಸೂದನ ಸಾಯಿ, ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಾಗಿರುವುದರಿಂದ ಸಂಬಳ ಹೆಚ್ಚಿಸುವಂತೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದಾಗ ಸಭಾಂಗಣದಲ್ಲಿ ಚಪ್ಪಾಳೆ ಸುರಿಮಳೆ ಆಯಿತು.ಸದ್ಗುರುಗಳು ಅಷ್ಟಕ್ಕೇ ಸುಮ್ಮನಾಗದೇ ಒಂದು ಕಥೆಯನ್ನೂ ಹೇಳಿದರು. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೈತರೊಬ್ಬರು ಬಿಹಾರದಿಂದ ಮುದ್ದೇನಹಳ್ಳಿಗೆ ಬಂದಿದ್ದರು. ಅವರಿಗೆ ಸುದೀರ್ಘ 8 ತಾಸು ಶಸ್ತ್ರಚಿಕಿತ್ಸೆ ಮಾಡಿದ್ದ ತಜ್ಞ ವೈದ್ಯರು ದಿನದ ಕೊನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಮತ್ತೆ ರೋಗಿಯ ರಕ್ತನಾಳದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಜ್ಞರು ಮತ್ತೆ ಶಸ್ತ್ರಚಿಕಿತ್ಸಾ ಕೊಠಡಿಗೆ ಓಡಬೇಕಾಯಿತು. ಮಧ್ಯರಾತ್ರಿ 1 ಗಂಟೆಯ ಹೊತ್ತಿಗೆ ರೋಗಿಗೆ ತುರ್ತಾಗಿ ರಕ್ತಬೇಕಾದ ಕಾರಣ, ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೈದ್ಯರೇ ರಕ್ತವನ್ನೂ ಕೊಟ್ಟರು. ಅವರು ಸಂಬಳಕ್ಕಷ್ಟೇ ಕೆಲಸ ಮಾಡುವವರಾಗಿದ್ದರೆ ಹೀಗೆ ಕೆಲಸ ಮಾಡಿ ಒಬ್ಬರ ಜೀವ ಉಳಿಸುತ್ತಿರಲಿಲ್ಲ. ಹೀಗೆ ಜವಾಬ್ದಾರಿ ಅರಿತು ಕೆಲಸ ಮಾಡುವವರು ಸಂಸ್ಥೆಯ ಆಸ್ತಿಯಾಗುತ್ತಾರೆ. ನಾವೆಲ್ಲರೂ ಹಾಗೆ ಯೋಚಿಸಬೇಕು ಎಂದು ಕಿವಿಮಾತು ಹೇಳಿದರು. ಬಾಗಲಕೋಟೆ ರೈತರಿಗೂ ಕೃಷಿ ಋಷಿ ಪ್ರಮಾಣಪತ್ರಸಾಧಕ ರೈತರಿಗೆ ಪ್ರಮಾಣಪತ್ರ ನೀಡುವ ಕೃಷಿ ಋಷಿ ಯೋಜನೆಯನ್ನು ಮುಂದಿನ ವರ್ಷದಿಂದ ಬಾಗಲಕೋಟೆಯಲ್ಲಿಯೂ ಜಾರಿ ಮಾಡಲಾಗುವುದು ಎಂದು ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 140 ರಾಗಿ ಬೆಳೆಗಾರರಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಈ ವರ್ಷ ಕೃಷಿ ಋಷಿ ಪ್ರಮಾಣಪತ್ರ ನೀಡಿ ಗೌರವಿಸಿದೆ. ತಜ್ಞರ ಸಮಿತಿ ನಮ್ಮ ರೈತರ ಜ್ಞಾನ ಗುರುತಿಸುತ್ತದೆ. ಮುಂದಿನ ವರ್ಷದಿಂದ ಇದನ್ನು ಬಾಗಲಕೋಟೆ ಜಿಲ್ಲೆಗೂ ವಿಸ್ತರಿಸಲಾಗು ವುದು ಎಂದು ಭರವಸೆ ನೀಡಿದರು. ಸೇವೆಗೆ ಸದ್ಗುರು ಸೂತ್ರಸಮಾಜಸೇವೆಗೆ ಒಂದು ಸೂತ್ರವಿದೆ. ನಿಮ್ಮ ವಯಸ್ಸಿನ ಸಂಖ್ಯೆಯಷ್ಟು ಪ್ರತಿಶತ ಸಮಯ ಮತ್ತು ಆದಾಯವನ್ನು ನೀವು ಸಮಾಜಸೇವೆಗೆ ಮೀಸಲಿಡಬೇಕು. ಉದಾಹರಣೆಗೆ ನಿಮ್ಮ ವಯಸ್ಸು 25 ವರ್ಷವಾಗಿದ್ದರೆ, ನಿಮ್ಮ ಆದಾಯದ ಶೇ 25ರಷ್ಟು ಮೊತ್ತ, ನಿಮ್ಮ ಸಮಯದ ಶೇ.25ರಷ್ಟು ವೇಳೆಯನ್ನು ನೀವು ಸಮಾಜಸೇವೆಗೆ ನೀಡಬೇಕು. ವಯಸ್ಸು ಹೆಚ್ಚಾದಂತೆ ಸೇವೆ ಮತ್ತು ದಾನದ ಪ್ರಮಾಣವೂ ಹೆಚ್ಚಾಗಬೇಕು ಎಂದು ಸದ್ಗುರು ಮಧುಸೂದನ ಸಾಯಿ ಸೂತ್ರವೊಂದನ್ನು ಪರಿಚಯಿಸಿದರು.

ಮನಸೇಳೆದ ಸಿಂಪೋನಿ ಸಂಗೀತ ವೈಭವ:

ಸತ್ಯ ಸಾಯಿ ಲೋಕ ಗುರುಕುಲಂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಾಯಿ ಸಿಂಪೊನಿ ಆರ್ಕೇಸ್ಟ್ರಾ ತಂಡದಿಂದ ನಡೆದ ಸಂಗೀತ ವೈಭವ ಜನರ ಮನಸೂರೆಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿ ಎದೆಹಾಲು ಅಮೃತಕ್ಕೆ ಸಮಾನ
ಜನರ ಜೀವ ರಕ್ಷಣೆಯಲ್ಲಿ ವೈದ್ಯರ ಸೇವೆ ಸ್ಮರಣೀಯ