ಪ್ರಕೃತಿ ಆರಾಧನೆ ಮೂಲಕ ನದಿ ಪರಿಸರಗಳ ಸಂರಕ್ಷಣೆ ಸಾಧ್ಯ ಎಂದು ರತ್ನ ಯತೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರಕೃತಿ ಆರಾಧನೆ ಮೂಲಕ ನದಿ ಪರಿಸರಗಳ ಸಂರಕ್ಷಣೆ ಸಾಧ್ಯ ಎಂದು ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ಜಿಲ್ಲಾ ಸಂಘದ ಅಧ್ಯಕ್ಷೆ ರತ್ನ ಯತೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಮಾಮಿ ಕಾವೇರಿ ಸಹಯೋಗದೊಂದಿಗೆ ಬುದ್ಧ ಪೂರ್ಣಿಮೆ ಸಂದರ್ಭ ನಡೆದ 172 ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದಕ್ಷಿಣ ಭಾರತದ ಜೀವನದಿ ಎನಿಸಿರುವ ಕಾವೇರಿಗೆ ನಮಿಸುವ ಕಾರ್ಯದೊಂದಿಗೆ ನದಿ ಸಂರಕ್ಷಣೆ ಕೆಲಸ ನಿರಂತರವಾಗಿ ಸಾಗಬೇಕಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಪತ್ರಕರ್ತರಾದ ಸಬಲಂ ಭೋಜಣ್ಣ ರೆಡ್ಡಿ ಅವರು ಮಾತನಾಡಿ, ಕಾವೇರಿ ಆರತಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದರಲ್ಲದೆ,
ಸರ್ಕಾರದ ಮೂಲಕ ಕೂಡ ಜಿಲ್ಲೆಯ ಆಯ್ದ ಭಾಗಗಳಲ್ಲಿ ಕಾವೇರಿ ಆರತಿ ನಡೆಸುವಂತಾಗಬೇಕು ಎಂದು ಆಗ್ರಹಿಸಿದರು. ಆ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಕೂಡ ಶಾಶ್ವತ ಪರಿಹಾರ ಕಾಣಲು ಸಾಧ್ಯ ಎಂದರು.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಾವೇರಿ ನದಿ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗಿರುವ ಬಳಗದ ಯಶಸ್ವಿ ಕಾರ್ಯಕ್ರಮದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಚಂದ್ರಮೋಹನ್ ನದಿ ಜಲಮೂಲಗಳ ಸಂರಕ್ಷಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ನಮಾಮಿ ಕಾವೇರಿ ತಂಡದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ಕೆಂಚಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ದೀಪ ಪೂಜಾರಿ, ತಾಲೂಕು ಅಧ್ಯಕ್ಷರಾದ ಬಿ ಜೆ ಅಣ್ಣಯ್ಯ, ಕಾರ್ಯದರ್ಶಿ ಆರ್ ಕುಮಾರ್ ಯೋಗೇಶ್, ಮುರಳಿ, ಎಚ್ಎಂ ಗಣೇಶ್ , ರೂಪ ಗಣೇಶ್, ದಿವ್ಯ ಅನಿಲ್, ಸಂದೀಪ್ ಶೆಟ್ಟಿ ಮತ್ತಿತರರು ಇದ್ದರು.
ಹುಣ್ಣಿಮೆ ಅಂಗವಾಗಿ ಗಡಿ ಭಾಗದ ಕಾವೇರಿ ಮಾತೆ ಪ್ರತಿಮೆಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.