ಭೂಮಿ ಪೂಜೆ । 20 ಲಕ್ಷ ರು.ವೆಚ್ಚದಲ್ಲಿ ಶೌಚಾಲಯ ಕಟ್ಟಡ
ಸ್ವಚ್ಛತೆ ಕಾಪಾಡುವ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿರುವ ಶುದ್ದ ಗಾಳಿ, ಬೆಳಕು ಮತ್ತು ವಾತಾವರಣವನ್ನು ನಮ್ಮದಾಗಿಸಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ನಗರದ ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆಯಡಿ ನೂತನ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಾಜ್ಯ ಗೃಹ ಮಂಡಲಿ ಅಧ್ಯಕ್ಷ ಹಾಗು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆ ಮೂಲಕ ಸುಮಾರು ೨೦ ಲಕ್ಷ ರು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನೂತನ ಶೌಚಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮನೆ ಮನೆಗೆ ಶೌಚಾಲಯ ಎಂಬ ಸುದುದ್ದೇಶ ಈ ಯೋಜನೆ ಮೂಲಕ ಜಾರಿಯಲ್ಲಿದ್ದು, ಆ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಿಗೆ ಬಂದು ಹೋಗುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಅತ್ಯವಶ್ಯಕವಾಗಿದೆ. ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ಶೌಚಾಲಯ ಸೌಲಭ್ಯವನ್ನು ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಸಾರ್ವಜನಿಕರಿಗೆ ನೀಡಲು ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸಾರ್ವಜನಿಕರು ಕಚೇರಿ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಿಸಿಕೊಳ್ಳಲು ಮುಂದಾಗಬೇಕು. ಇದೇ ಯೋಜನೆಯ ಮೂಲಕ ನಗರದ ಪ್ರತ್ಯೇಕ ಎರಡು ಸಾರ್ವಜನಿಕ ಸ್ಥಳಗಳಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಈ ಮೂರು ಶೌಚಾಲಯಗಳ ನಿರ್ಮಾಣದ ವೆಚ್ಚ ಅಂದಾಜು ೬೦ ಲಕ್ಷ ರು. ಆಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಶಮೀವುಲ್ಲಾ, ಜಿ.ಟಿ ಗಣೇಶ್, ಮನೋಹರ್ ಮೇಸ್ತ್ರಿ, ಅನ್ನಪೂರ್ಣ, ಪ್ರೇಮಾ ಮಲ್ಲಿಕಾರ್ಜುನ, ವೆಂಕಟಮುನಿ, ಜಾಕೀರ್ ಹುಸೈನ್, ಶುಭಾ ಮನೋಜ್ ಕುಮಾರ್, ಮಧುರಾ ಹರೀಶ್, ಸುಜಾತ ರಮೇಶ್, ಕಲಯ್ ಅರಸಿ, ಶಮಾ, ರೇಷ್ಮ, ಮುಖಂಡರಾದ ಗೀಜಿಹಳ್ಳಿ ಧರ್ಮೇಶ್, ನಾಗರಾಜು, ತಹಸೀಲ್ದಾರ್ ರುಕಿಯಾ ಬೇಗಂ, ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ, ಶಿರಸ್ತೇದಾರ್ ಶಿವಶಂಕರ್, ನಗರಸಭೆ ಪೌರಾಯುಕ್ತ ಬಸವರಾಜು, ಅಭಿಯಂತರ ಸುನಿಲ್, ಜಗದೀಶ್, ಪರಿಸರ ಅಭಿಯಂತರ ರವಿ ಇದ್ದರು. ಅರಸೀಕೆರೆಯ ಮಿನಿ ವಿಧಾನಸೌಧ ಆವರಣದಲ್ಲಿ ನೂತನ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು.