ಪರಿಸರ ರಕ್ಷಣೆಯೂ ಮುಖ್ಯ: ಪುರಸಭೆ ಅಧ್ಯಕ್ಷೆ ರೇಖಾ

KannadaprabhaNewsNetwork | Published : Jun 6, 2025 12:21 AM
ಪರಿಸರ ಬೆಳೆಸಲು ಜಾಗವು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾವರಣ ಸೇರಿದಂತೆ ವಿವಿಧೆಡೆ ಖಾಲಿ ಜಾಗದಲ್ಲಿ ಸಸಿ ನಾಟಿ ಮಾಡಿ ಬೆಳೆಸುವುದರಿಂದ ಮಕ್ಕಳಲ್ಲಿ ಪರಿಸರ ಮತ್ತು ಮರ-ಗಿಡಗಳ ಬೆಳೆಸುವ ಹವ್ಯಾಸದೊಂದಿಗೆ ಅರಿವು ಮೂಡಿಸಿದಂತೆ ಆಗುತ್ತದೆ.

ಕಾರಟಗಿ:

ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ಪರಿಸರ ರಕ್ಷಣೆಯೂ ಮುಖ್ಯವಾಗಿದ್ದು ಪಟ್ಟಣವನ್ನು ಹಸರೀಕರಣ ಮಾಡಲು ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಹೇಳಿದರು.

ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿಯ ಇಂದಿರಾ ಕ್ಯಾಂಟೀನ್‌ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪುರಸಭೆ ವತಿಯಿಂದ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣ ನಾಲ್ಕು ದಿಕ್ಕಿನಲ್ಲಿಯೂ ಬೆಳೆಯುತ್ತಿದ್ದು ಹೊಸ ಬಡಾವಣೆಗಳಲ್ಲಿ ಹೆಚ್ಚು ಗಿಡ ನೆಡಬೇಕು. ಖಾಲಿ ನಿವೇಶನದಲ್ಲಿ ಗಿಡ ನೆಡುವ ಮೂಲಕ ಪರಿಸರ ಬೆಳೆಸಿ ಮುಂದಿನ ಪೀಳಿಗೆಗೆ ಹಸಿರ ಲೋಕ ಉಳಿಸಬೇಕು ಎಂದರು.

ಪರಿಸರ ಬೆಳೆಸಲು ಜಾಗವು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾವರಣ ಸೇರಿದಂತೆ ವಿವಿಧೆಡೆ ಖಾಲಿ ಜಾಗದಲ್ಲಿ ಸಸಿ ನಾಟಿ ಮಾಡಿ ಬೆಳೆಸುವುದರಿಂದ ಮಕ್ಕಳಲ್ಲಿ ಪರಿಸರ ಮತ್ತು ಮರ-ಗಿಡಗಳ ಬೆಳೆಸುವ ಹವ್ಯಾಸದೊಂದಿಗೆ ಅರಿವು ಮೂಡಿಸಿದಂತೆ ಆಗುತ್ತದೆ ಎಂದು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಮಾತನಾಡಿ, ಹೊಸ ಬಡಾವಣೆ ಮಾಲಿಕರು ಹೆಚ್ಚು ಗಿಡ ನೆಡಲು ಇದು ಸಕಾಲವಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ ಮಾತನಾಡಿ, ಬಿಸಿಲಿನ ತಾಪದಿಂದ ಉಷ್ಣಾಂಶ ಹೆಚ್ಚಳವಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಬೀಸಿಲಿನ ತಾಪಮಾನ ತಗ್ಗಿಸಲು ಪರಿಸರದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಭವಿಷ್ಯದಲ್ಲಿ ನಿತ್ಯ ಉಪಯುಕ್ತವಾಗುವಂತಹ ನೆರಳು ಹಾಗೂ ಫಲ ನೀಡುವ ಗಿಡ ನೆಟ್ಟು ಪೋಷಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು. ಅಂದಾಗ ಮಾತ್ರ ಸಮೃದ್ಧ ಹಚ್ಚ-ಹಸಿರಿನ ಪರಿಸರ ನಿರ್ಮಿಸಬಹುದು ಎಂದು ಹೇಳಿದರು.

ಇಗಾಗಲೇ ಪರಿಸರ ನಾಶ ಮೀತಿ ಮೀರಿದ್ದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಾನವ ಸಂಕುಲಕ್ಕೆ ಭವಿಷ್ಯವಿಲ್ಲದಂತೆ ಆಗುತ್ತದೆ. ಸಸಿ ನಾಟಿ ಮಾಡಿ ಪೋಷಿಸಲು ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ನಿರ್ವಹಣೆಯ ಹೊಣೆ ವಹಿಸಲಾಗಿದೆ. ಇದರಿಂದ ನೆಟ್ಟಿರುವ ಸಸಿಗಳ ಪೋಷಣೆ, ನಿರ್ವಹಣೆ ಸಮರ್ಪಕವಾಗುತ್ತದೆ. ಪರಿಸರ ದಿನಾಚರಣೆ ಬರಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾತ್ರ ಮೀಸಲಾಗದೆ ವರ್ಷ ಪೂರ್ತಿ ನಡೆಯಬೇಕು ಎಂದು ಕರೆ ನೀಡಿದರು.

ಪುರಸಭೆ ಸಿಬ್ಬಂದಿ ಚನ್ನಬಸವ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪುರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.