ಕನ್ನಡಪ್ರಭ ವಾರ್ತೆ ಬೀದರ್
ಪರಿಸರ ಉಳಿದರೆ ಮಾತ್ರ ಮನುಕುಲ ಹಾಗೂ ಜೀವರಾಶಿ ಬದುಕಲು ಸಾಧ್ಯ, ಪರಿಸರದ ನಾಶ ಮನುಷ್ಯನ ವಿನಾಶಕ್ಕೆ ಕಾರಣವಾಗಬಹುದು, ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಹಾಗೂ ಪಶು-ಪಕ್ಷಿಗಳ ರಕ್ಷಿಸುವ ಮೂಲಕ ಪರಿಸರದ ಸಂರಕ್ಷಣೆ ಮಾಡಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಪರಮೇಶ್ವರ ನಾಯಕ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ ಘಟಕದಿಂದ ನಗರದ ಗುರುನಾನಕ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಜೀವಿಯ ನೆಲೆಯಾಗಿರುವ ಭೂಮಿಯನ್ನು ಉಳಿಸಬೇಕಾದರೆ ನೀರು, ಗಾಳಿ, ಮಾಲಿನ್ಯ ತಡೆದು ಪರಿಸರ ಸಂರಕ್ಷಿಸಬೇಕು. ಆಹಾರ ಉತ್ಪಾದನೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ ನಿಲ್ಲಿಸಬೇಕೆಂದು ಕರೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ವೀರಶೆಟ್ಟಿ ಮೈಲೂರ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೈಗಾರಿಕರಣ, ನಗರಿಕರಣ ಹಾಗೂ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಯಲು ಗಿಡ-ಮರಗಳನ್ನು ರಕ್ಷಿಸಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಮತ್ತು ಪ್ರತಿಯೊಬ್ಬರು ಕನಿಷ್ಠ ಪ್ರತಿವರ್ಷ ಒಂದು ಸಸಿ ನೆಡಬೇಕು. ಪರಿಸರದ ಸಮತೋಲನ ಕಾಪಾಡಿದರೆ ಮಾತ್ರ ಮನುಷ್ಯ ಅರೋಗ್ಯದಿಂದ ಬದುಕಲು ಸಾಧ್ಯ ಎಂದರು.ಮುಖ್ಯ ಅತಿಥಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸುರೇಂದರ್ ಸಿಂಗ್ ಮಾತನಾಡಿ, ಇಂದು ವಿಶ್ವ ಪದೇ ಪದೇ ಪ್ರಕೃತಿ ವಿಕೋಪಗಳು, ಬಿಸಿಲಿನ ತಾಪ ಉಂಟಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಡಾ. ವೈಜಿನಾಥ ಕಮಠಾಣೆ ಮಾತನಾಡಿದರು.ಗುರು ನಾನಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ಯಾಮಲಾ ದತ್ತ ಮಾತನಾಡಿ, ಪರಿಸರ ಮಾಲಿನ್ಯ ಇಂದು ಅಪಾಯ ಮಟ್ಟಕ್ಕೆ ತಲುಪುತ್ತಿದೆ, ಇದನ್ನು ತಡೆಗಟ್ಟಲು ವಿಶ್ವಸಂಸ್ಥೆ 1973 ರಿಂದ ಜೂ.5ರಂದು ವಿಶ್ವ ಪರಿಸರ ದಿನಚರಣೆ ಆಚರಿಸಲು ಕರೆ ನೀಡಿದೆ ಎಂದರು.
ಈ ಸಂಧರ್ಭದಲ್ಲಿ ಕಾಲೇಜಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಜಗದೀಶ ಅಕ್ಕಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು. ಸಾಕ್ಷಿ ಕಾವ್ಯ ನಿರೂಪಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ ಸಂಜಯ ಮೈನಾಳೆ, ಗೌರಮ್ಮ ಮಠಪತಿ, ಡಾ ನಾಗೇಶ ಯರನಾಳೆ, ರೆಹಮನ್ ಖಾನ್, ವೈಜಿನಾಥ ಪಾಟೀಲ, ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದರು.