ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪರಿಸರ ಸಂರಕ್ಷಣೆಯ ಬಗೆಗೆ ಮಾಹಿತಿ ಮತ್ತು ಅರಿವಿದ್ದರಷ್ಟೆ ಸಾಲದು, ನಮ್ಮ ಅರಿವು ಆಲೋಚನೆಯಾಗಬೇಕು, ಆಲೋಚನೆಯು ಜೀವನದಲ್ಲಿ ಆಚರಣೆಗೆ ಬಂದಾಗ ಪರಿಸರ ಸಂರಕ್ಷಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನ ಕ್ರಮವನ್ನು ಪಾಲಿಸುವುದು ಅವಶ್ಯಕ ಎಂದು ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟು, ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು,
ಪರಿಸರ ಮೌಲ್ಯಗಳನ್ನು ಪಾಲಿಸಿನಮ್ಮ ಪೂರ್ವಿಕರು ಭೂಮಿ, ಮರ-ಗಿಡಗಳು ಹಾಗೂ ಜೀವಸಂಕುಲಗಳನ್ನು ದೇವರೆಂದು ಭಾವಿಸಿ ಗೌರವಿಸುತ್ತಿದ್ದರು. ಇದರಿಂದಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷರಣೆಯ ಮಹತ್ವವನ್ನು ಅರಿತು ಪರಿಸರ ಮೌಲ್ಯಗಳನ್ನು ಪಾಲಿಸುತ್ತಿದ್ದರು. ಪರಿಸರಕ್ಕೆ ಪರ್ಯಾಯವಿಲ್ಲ. ಶಾಲಾ ಹಂತದಲ್ಲಿಯೇ ಭೂಮಿ ಮತ್ತು ಪರಿಸರದ ವಿಷಯಗಳ ಬಗ್ಗೆ ಕಲಿತರೆ ಅದು ಜೀವನ ಪಾಠವಾಗುತ್ತದೆ ಎಂದರು.ಶಾಂತ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಕ ಡಾ. ಕೋಡಿರಂಗಪ್ಪರವರು ಮಾತನಾಡಿ, 20 ನೇ ಶತಮಾನದ ಮಧ್ಯಭಾಗದವರೆಗೆ ಭೂಮಿಯ ಮೇಲಿನ ಕಾರ್ಯಾಚರಣೆಗಳಿಗೆ ಒಂದು ಮಿತಿ ಇತ್ತು. ಆನಂತರ ಆದ ಬೃಹತ್ ಕೈಗಾರಿಕೆಗಳು, ಮೆಗಾ ನಗರಗಳು, ಸಂಚಾರದ ದಟ್ಟಣೆ, ಇಂಗಾಲದ ಡೈಯಾಕ್ಸೈಡ್ ಹೊರಸೂಸುವ ಪ್ರಮಾಣ ಮಿತಿಮೀರಿದೆ, ಆದ್ದರಿಂದ ನಮ್ಮ ಜೀವನ ಶೈಲಿಯನ್ನು ನೈಸರ್ಗಿಕ ನಿಯಮಗಳಿಗನುಗುಣವಾಗಿ ರೂಪಿಸಿಕೊಳ್ಳದಿದ್ದರೆ ಭೂಮಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಿಗೆ ಸಸಿ ವಿತರಣೆಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಲಾ ಒಂದು ಸಸಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಪ್ರಸಾದ್, ಅಧ್ಯಾಪಕರಾದ ಕಲ್ಯಾಣಿ, ರಂಗರಾಜನ್, ಲವಕುಮಾರ್, ರಾಧಾ, ಅಂಬಿಕಾ, ವೆಂಕಟೇಶ್, ಸುಜಯ, ಶಶಿಧರ್, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮತ್ತು ಸಂದೇಶ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥ, ನರ್ಸಿಂಗ್ ಕಾಲೇಜಿನ ಡಾ. ಡಯಾನಾ, ಪ್ರೊ. ಆಯಿಷಾ ಭಟ್, ಅರೆವೈದ್ಯಕೀಯ ಶಿಕ್ಷಣ ಕೋರ್ಸುಗಳ ಪ್ರಾಂಶುಪಾಲ ಪ್ರೊ. ನರೇಶ್ ಕುಮಾರ್, ಅಲೈಡ್ ಹೆಲ್ತ್ಸೈನ್ಸ್ನ ರಂಜಿತ್, ಆಡಳಿತಾಧಿಕಾರಿ ಕೆನೆತ್ ಹಾಲಿಡೇ, ವ್ಯವಸ್ಥಾಪಕ ಶರವಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.