ಶಿವಮೊಗ್ಗದಲ್ಲಿ ಮರ ಕಡಿತಕ್ಕೆ ಪರಿಸರಪ್ರಿಯರ ಆಕ್ರೋಶ

KannadaprabhaNewsNetwork |  
Published : Jun 12, 2025, 01:01 AM ISTUpdated : Jun 12, 2025, 01:02 AM IST
ಪೊಟೋ: 11ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್ ಪಾಥ್ ಮೇಲೆ ಅಕ್ರಮವಾಗಿ ಮರಗಳ ಕಡಿತಲೆ ಆಗಿದ್ದನ್ನು ವಿರೋಧಿಸಿ ಬುಧವಾರ ಪರಿಸರ ಪ್ರಿಯರು ಘಟನಾ ಸ್ಥಳದಲ್ಲೇ ಪ್ರತಿಭಟನಾ ಧರಣಿ ನಡೆಸಿದರು. | Kannada Prabha

ಸಾರಾಂಶ

ಅಕ್ರಮವಾಗಿ ಮರಗಳ ಕಡಿತ ಆಗಿದ್ದನ್ನು ವಿರೋಧಿಸಿ ಬುಧವಾರ ಪರಿಸರ ಪ್ರಿಯರು ಘಟನೆ ನಡೆದ ನಗರದ ಬಿ.ಎಚ್.ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್‌ಪಾತ್‌ ಮೇಲೆಯೇ ಪ್ರತಿಭಟನೆ ನಡೆಸಿದರು.

ಬಿ.ಎಚ್‌.ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪ್ರತಿಭಟನೆ । 2 ಬಾದಾಮಿ ಮರಗಳ ಕೊಯ್ದಿದ್ದ ದುಷ್ಕರ್ಮಿಗಳು । ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಕ್ರಮವಾಗಿ ಮರಗಳ ಕಡಿತ ಆಗಿದ್ದನ್ನು ವಿರೋಧಿಸಿ ಬುಧವಾರ ಪರಿಸರ ಪ್ರಿಯರು ಘಟನೆ ನಡೆದ ನಗರದ ಬಿ.ಎಚ್.ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್‌ಪಾತ್‌ ಮೇಲೆಯೇ ಪ್ರತಿಭಟನೆ ನಡೆಸಿದರು.

ಬೆಳೆದು ನಿಂತಿದ್ದ ಎರಡು ಬಾದಾಮಿ ಮರಗಳ ಬುಡಕ್ಕೆ ಯಾರೋ ದುಷ್ಕರ್ಮಿಗಳು ಗರಗಸ ಹಚ್ಚಿ ಧರೆಗುರುಳಿಸಿದ್ದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಧರಣಿನಿರತ ಪರಿಸರಪ್ರಿಯ ಪ್ರಮುಖರು ಮಾತನಾಡಿ, ನಗರದಲ್ಲಿ ಈ ರೀತಿಯ ಮರಕಡಿತಲೆ ದುಷ್ಕೃತ್ಯ ಅವ್ಯಾಹತವಾಗಿ ನಡೆದಿದೆ. ಅಂಗಡಿ ಮುಂಗಟ್ಟುಗಳಿಗೆ ಮರೆಯಾಗಿ ಸಾರ್ವಜನಿಕರಿಗೆ ಕಾಣುತ್ತಿಲ್ಲವೆಂದೋ, ಮನೆಯ ಎದುರು ಇರುವ ಮರದ ಎಲೆಗಳು ಕಸ ಹರಡುತ್ತದೆ ಎಂತಲೋ ಹೀಗೆ ಅನೇಕ ಕಾರಣಗಳಿಂದ ಮರಗಳ ಮಾರಣ ಹೋಮ ನಡೆಯುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ರಸ್ತೆ ಬದಿಯಲ್ಲಿರುವ ಮರಗಳಿಗೆ ತೂತು ಮಾಡಿ ಇಂಗು ತುಂಬಿ ಮರ ಕ್ರಮೇಣ ತಾನಾಗಿಯೇ ಒಣಗಿ ಸಾಯುವಂತೆ ಮಾಡುವ ಕೆಟ್ಟ ಸಂಪ್ರದಾಯ ಆರಂಭವಾಗಿದೆ ಎಂದು ಧರಣಿನಿರತರು ಕೆಂಡಕಾರಿದರು.

ಈಗ ಕಡಿತದಿಂದ ನೆಲಕ್ಕುರುಳಿದ ಮರಗಳನ್ನು ತಾವು 2019ರಲ್ಲಿ ನೆಟ್ಟಿದ್ದು, ನಿಯಮಿತವಾಗಿ ಆರೈಕೆ ಮಾಡಿದ್ದರ ಫಲವಾಗಿ ಈಗ ಅತ್ಯಂತ ಸುಂದರವಾಗಿ ಬೆಳೆದು ನಿಂತಿದ್ದವು. ಆದರೆ ರಾತ್ರಿ ದುರುಳರು ಇವುಗಳಿಗೆ ಗರಗಸ ಹಚ್ಚಿ ನೆಲಕ್ಕುರುಳಿಸಿದ್ದಾರೆ. ಒಂದು ಮರವನ್ನು ಗರಗಸದಿಂದ ಅರ್ಧ ಮಾತ್ರ ಕತ್ತರಿಸಿ ಹಾಗೇ ಬಿಟ್ಟು ಹೋಗಿದ್ದಾರೆ. ಯಾವುದೇ ಸಮಯದಲ್ಲಿ ಬೀಳುವ ಅಪಾಯವಿದೆ. ನಮ್ಮ ಪ್ರಕಾರ ಈ ಮರಗಳ ಕೊಲೆಯಾಗಿದೆ. ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸಬೇಕು.

ನಗರದಲ್ಲಿರುವ ಮರಗಳನ್ನು ಗುರುತಿಸಿ ಜಿಯೋ ಟ್ಯಾಗ್ ಮಾಡಬೇಕು. ಮರಗಳ್ಳರಿಗೆ ದುಪ್ಪಟ್ಟು ದಂಡ, ಕಾರಾಗೃಹ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಒಂದು ಹಂತದಲ್ಲಿ ಅರಣ್ಯ, ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪರಿಸರಪ್ರಿಯರು ಪಟ್ಟು ಹಿಡಿದು ಕಳಿತರು.

ಬಳಿಕ ನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಧರಣಿ ಸ್ಥಳಕ್ಕೆ ಆಗಮಿಸಿ, ಮರ ಕಡಿತಕ್ಕೆ ನನ್ನ ತೀವ್ರ ವಿರೋಧವಿದೆ. ಮರ ಗಿಡ ಸಂರಕ್ಷಿಸಿ ಪರಿಸರ ಉಳಿವಿಗೆ ಸಾರ್ವಜನಿಕರೊಂದಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಡಿತದ ಮರಗಳನ್ನು ವೀಕ್ಷಿಸಿ, ಸಿಸಿ ಕ್ಯಾಮೆರಾ ನೋಡಿ ಕಡಿದ ಆರೋಪಗಳು ಯಾರು ಎಂಬುದನ್ನು ಶೋಧಿಸುತ್ತೇವೆ. ಅಪರಾಧಿಗಳನ್ನು ಹಿಡಿಯುತ್ತೇವೆ. ನಗರದಲ್ಲಿ ಪರಿಸರ ಸಂರಕ್ಷಣೆಗೆ ಅರಣ್ಯ ಸಮಿತಿಯನ್ನು ಇನ್ನಷ್ಟು ಜಾಗೃತ ಗೊಳಿಸುತ್ತೇವೆ. ಗಿಡ ಮರಗಳ ಮೇಲೆ ನಿರಂತರ ನಿಗಾ ಇಟ್ಟು ಅವುಗಳನ್ನು ಸಂರಕ್ಷಿಸುವ ಕಾರ್ಯ ಮುಂದುವರಿಸುತ್ತೇವೆ. ಇನ್ನೊಂದು ವಾರದ ಒಳಗಾಗಿ ದುಷ್ಕರ್ಮಿಗಳನ್ನು ಹಿಡಿಯುತ್ತೇವೆ ಎಂಬ ಭರವಸೆಯ ಬಳಿಕ ಪರಿಸರಪ್ರಿಯರು ಧರಣಿ ಹಿಂಪಡೆದರು.

ಪರಿಸರಪ್ರಿಯರಾದ ತ್ಯಾಗರಾಜ ಮಿತ್ಯಾಂತ, ಡಾ.ಬಾಲಕೃಷ್ಣ ಹೆಗಡೆ, ಡಾ.ಶೇಖರ್ ಗೌಳೇರ್, ಬಾಲಕೃಷ್ಣ ನಾಯ್ಡು, ಎಸ್.ಬಿ.ಅಶೋಕ್ ಕುಮಾರ್, ಗಜಾನನ ಸಭಾಹಿತ, ನಾಗರಾಜ್ ಶೆಟ್ಟರ್, ಅನಿಲ್ ಹೆಗ್ಡೆ, ಬಾಲಾಜಿ ದೇಶಪಾಂಡೆ, ಶಿವಕುಮಾರ ಮೈಲಾರ, ಅಧಿಕಾರಿಗಳಾದ ಡಿಆರ್ ಎಫ್ ಒ ನರೇಂದ್ರ, ಡಿವೈಎಸ್ಪಿ ಸಂಜೀವ ಕುಮಾರ್ ಮತ್ತಿತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ