ರಾಮನಗರ: ಡೆಂಘೀ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ಕೆಲ ಮುಂಜಾಗ್ರತಾ ಕ್ರಮಗಳಿಂದ ನಿಯಂತ್ರಿಸಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪದ್ಮಾವತಿ ಹೇಳಿದರು.
ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಂದಾಗಿ ಡೆಂಘೀ ಪ್ರಕರಣಗಳನ್ನು ಶೇ.10ರಷ್ಟು ಕಡಿಮೆ ಮಾಡಬಹುದು. ಜಿಲ್ಲೆ ಮಲೇರಿಯಾ ನಿರ್ಮೂಲನೆ ಮಾಡುವ ಹಂತದಲ್ಲಿದ್ದೇವೆ. ಡೆಂಘೀ ಕಾಯಿಲೆಯಿಂದ ಉಂಟಾಗುವ ಮರಣವನ್ನು ಕಡಿಮೆ ಮಾಡಬೇಕು ಮತ್ತು ಚಿಕೂನ್ ಗುನ್ಯಾ ಕಾಯಿಲೆ ಸೊಳ್ಳೆಯಿಂದ ಹರಡುವ ಕಾಯಿಲೆ ಆಗಿದ್ದರೂ ಮರಣದ ಪ್ರಮಾಣ ಕಂಡು ಬರುವುದಿಲ್ಲ. ಇದರ ಬದಲಾಗಿ ಜ್ವರ, ಕೀಲು ನೋವು ಕಂಡುಬರುತ್ತವೆ. ಅದಕ್ಕೆ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ ಮಕ್ಕಳಲ್ಲಿ ಮೆದುಳು ಜ್ವರ ಕಂಡು ಬರುತ್ತದೆ. ಈ ಜ್ವರಕ್ಕೆ 2 ಡೋಸ್ನಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೂ ಅವರಲ್ಲಿ ನ್ಯೂರೋಲಾಜಿಕಲ್ ಡಿಫೆಕ್ಸ್ ಕಾಣುತ್ತೇವೆ. ಆದಕಾರಣ ಮೆದುಳು ಜ್ವರ ಬಾರದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.ಸೊಳ್ಳೆಗಳಲ್ಲಿ ಹಗಲು ಹಾಗೂ ರಾತ್ರಿ ಕಚ್ಚುವ ಸೊಳ್ಳೆಗಳಿವೆ, ರಾತ್ರಿ ಕಚ್ಚುವ ಸೊಳ್ಳೆಗಳ ಬಗ್ಗೆ ಜಾಗೃತರಾಗಿರುವಂತೆಯೇ ಹಗಲಲ್ಲಿ ಕಚ್ಚುವ ಸೊಳ್ಳೆಗಳ ಬಗ್ಗೆಯೂ ಎಚ್ಚರ ವಹಿಸಬೇಕು, ಹಗಲಲ್ಲಿ ಕಚ್ಚುವ ಸೊಳ್ಳೆ ಡೆಂಘೀ ಮತ್ತು ಚಿಕೂನ್ ಗುನ್ಯಾ ತರುತ್ತವೆ. ಹವಾಮಾನ ಬದಲಾವಣೆಯಿಂದ ಮಾನವನ ಮೇಲೆ ಆಗುವ ಪರಿಣಾಮವನ್ನು ಡಿ-ಹೈಡ್ರೇಷನ್ ಎನ್ನತ್ತೇವೆ. ಬೇಸಿಗೆಯಲ್ಲಿ ನೀರಿನ ಅಂಶ ನಮ್ಮ ದೇಹದಿಂದ ಹೊರ ಹೋಗುತ್ತದೆ, ಇದು ಹೆಚ್ಚು ಹೊರ ಹೋಗುವುದು ಒಳ್ಳೆಯದಲ್ಲ, ಆದ್ದರಿಂದ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು. ಮಕ್ಕಳು, ಬಾಣಂತಿಯರು, ಗರ್ಭಿಣಿಯರು, ವಯೋವೃದ್ಧರಲ್ಲಿ ಈ ಕಾಯಿಲೆಗಳು ಕಂಡುಬರುತ್ತದೆ. ಹಾಗಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪದ್ಮಾವತಿ ಹೇಳಿದರು.
ಆರೋಗ್ಯ ಮೇಲ್ವಿಚಾರಕರಾಜೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಉಮಾ, ಅಗ್ನಿಶಾಮಕ ದಳ ಇಲಾಖೆ ಮುತ್ತಣ್ಣ ಹಾಗೂ ಬಂದನೇಶ್, ಜಿಲ್ಲಾ ಕೀಟ ಶಾಸ್ತ್ರಜ್ಞರಾದ ಸೌಮ್ಯ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ರಾಮನಗರದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಕುರಿತು ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕುರಿತು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನ ಕಾರ್ಯಕ್ರಮವನ್ನು ಡಾ.ಪದ್ಮಾವತಿ ಉದ್ಘಾಟಿಸಿದರು.