ಹಗರಿಬೊಮ್ಮನಹಳ್ಳಿ: ಜನ ಕಲ್ಯಾಣಕ್ಕಾಗಿ ಸಮಾನತೆ ಪ್ರತಿಪಾದಿಸುವುದು ಮಾತ್ರವಲ್ಲ ಆಚರಣೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ತಿಳಿಸಿದರು.
ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಸಮಾನತೆಯ ಆಶಯಗಳನ್ನು ಕಾರ್ಯರೂಪಕ್ಕೆ ತರಲು, ದೀನದಯಾಳ ಉಪಾಧ್ಯ ಅವರ ಕಾಲದಿಂದಲೂ ನಮ್ಮ ಪಕ್ಷ ಆಗ್ರಹಿಸಿದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಕಳೆದ 13 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ, ಅವರ ಚಿಂತನಾ ಕ್ರಮಗಳು ಮತ್ತು ದೂರದರ್ಶಿತ್ವ ಕುರಿತಂತೆ ಪಕ್ಷದ ಕಾರ್ಯಕರ್ತರು ಮಾಹಿತಿ ಹೊಂದಿರಬೇಕು. ಪ್ರತಿ ಬೂತ್ ಮಟ್ಟದಲ್ಲಿ ಮತದಾರರಲ್ಲಿ ಎಲ್ಲ ಅಂಶಗಳನ್ನು ಅನುರಣಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಬೇಕು ಎಂದು ಕೋರಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೂತ್ ಮಟ್ಟದ ಸಂಘಟನೆ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ನಾಯ್ಕ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ, ಮಂಡಲ ನೇತೃತ್ವದಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ಪಕ್ಷದ ಕಾಯಕರ್ತರಿಗೆ ಪಕ್ಷ ಸಂಘಟನೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿರುವ ಪಕ್ಷದ ವರಿಷ್ಠರು ಸೇರಿದಂತೆ ಪ್ರಮುಖರಾದ ಓದೋ ಗಂಗಪ್ಪ, ರೊಟ್ಟಿ ಕೊಟ್ರಪ್ಪ, ಕಿಚಡಿ ಕೊಟ್ರೇಶ್, ಡಾ. ಅಜ್ಜಯ್ಯ, ಪೂಜ್ಯಪ್ಪ ಮತ್ತು ಸಂದೀಪಸಿಂಗ್ ಅವರು ಅಭಿನಂದನಾರ್ಹರು ಎಂದು ತಿಳಿಸಿದರು.