ಸಿರುಗುಪ್ಪ: ರಂಗಭೂಮಿ ಇಂದು ಸಾಂಸ್ಕೃತಿಕ ಪರಂಪರೆ ಉಳಿಸಿಕೊಳ್ಳುವುದರ ಜೊತೆಗೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಾಧ್ಯಮವಾಗಿ, ಸಾಮಾಜಿಕ ಜವಾಬ್ದಾರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ಜೆ. ನರಸಿಂಹಮೂರ್ತಿ ತಿಳಿಸಿದರು.
19ನೇ ಶತಮಾನದ ಉತ್ತರಾರ್ಧದಲ್ಲಿ ಪಾಶ್ಚಾತ್ಯ ಪ್ರಭಾವ ಮತ್ತು ಮರಾಠಿ ನಾಟಕಗಳ ಪ್ರೇರಣೆಯಿಂದ ವೃತ್ತಿ ನಾಟಕ ಕಂಪನಿಗಳು ಶುರುವಾದವು. ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಂಗಭೂಮಿಗೆ ಭಾರಿ ಪ್ರೋತ್ಸಾಹ ನೀಡಿದರು. ಇದನ್ನು "ಸ್ವರ್ಣಯುಗ "ಎಂದು ಕರೆಯಲಾಗುತ್ತದೆ. 20ನೇ ಶತಮಾನದ ಮಧ್ಯಭಾಗದಲ್ಲಿ ಹವ್ಯಾಸಿ ರಂಗಭೂಮಿ ಚಟುವಟಿಕೆ ಹೆಚ್ಚಾದವು. ಮೈಸೂರಿನ ''''ರಂಗಾಯಣ''''ದಂತಹ ಸಂಸ್ಥೆಗಳು ರಂಗ ತರಬೇತಿ ಮತ್ತು ಪ್ರದರ್ಶನಗಳಲ್ಲಿ ಹೊಸ ಆಯಾಮ ತಂದವು ಎಂದು ಹೇಳಿದ ಅವರು ಸಾಮಾಜಿಕ ಸಮಸ್ಯೆಗಳು, ರಾಜಕೀಯ ವಿಡಂಬನೆ ಮತ್ತು ಬೀದಿ ನಾಟಕಗಳು, ಪ್ರಯೋಗಾತ್ಮಕ ನಾಟಕಗಳು ಇಂದಿನ ರಂಗಭೂಮಿಯ ಮುಖ್ಯ ಭಾಗವಾಗಿವೆ ಎಂದು ರಂಗಭೂಮಿಯ ಮಹತ್ವ ವಿವರಿಸಿದರು.
ಅರಳಿಗನೂರಿನ ಶಿಕ್ಷಕ ಯೋಗೇಶ್ ಮತ್ತು ವಿದ್ಯಾರ್ಥಿಗಳಾದ ಮಾರೇಶ, ತಿಪ್ಪೇಸ್ವಾಮಿ, ವೀರೇಶ್ ತಂಡದಿಂದ ಬಯಲಾಟ ಪ್ರದರ್ಶನ ನಡೆಯಿತು. ಕೆ. ಸೂಗೂರು ಗ್ರಾಮದ ನಾಗರಾಜ್ ತಂಡ ರಂಗಭೂಮಿ ಗೀತೆಗಳನ್ನು ಪ್ರಸ್ತುತಪಡಿಸಿತು.ಯುವ ರಂಗಭೂಮಿ ಕಲಾವಿದ, ಹಾರ್ಮೋನಿಯಂ ಮಾಸ್ಟರ್ ಉತ್ತನೂರು ಮಾರೇಶ್, ರಂಗಭೂಮಿ ಹಿರಿಯ ಕಲಾವಿದ ಜೆ. ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.