ಕನ್ನಡಪ್ರಭ ವಾರ್ತೆ ಬೀದರ್
ಅರಬ್ ದೇಶದಲ್ಲಿ ಜಾರಿಯಲ್ಲಿದ್ದ ಮೇಲು ಕೀಳು ಬುಡಕಟ್ಟುಗಳ ಭೇದವನ್ನು ಸಂಪೂರ್ಣವಾಗಿ ತೊಡೆದು ಹಾಕಿ ಎಲ್ಲಾ ಮಾನವರು ಒಂದೇ ತಂದೆಯ ಮಕ್ಕಳು ಎಂಬ ಸಂದೇಶ ನೀಡಿ ಸಮಾನತೆ ಬೋಧಿಸಿ ನಮಾಜ್ ಮತ್ತು ಒಂದೇ ತಟ್ಟೆಯಲ್ಲಿ ಊಟ ಮಾಡುವ ಪದ್ಧತಿ ಜಾರಿ ಮಾಡಿದ ಸಮಾನತೆ ಹರಿಕಾರ ಪ್ರವಾದಿ ಮಹಮ್ಮದ್ ಎಂದು ಬೀದರ್ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ನುಡಿದರು.ಅವರು ಭಾನುವಾರ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಪ್ರವಾದಿ ಮಹಮ್ಮದ್ (ಸ್) ಮಹಾನ್ ಜಾರಿತ್ರ್ಯವಂತ ಎನ್ನುವ ವಿಷಯದ ಮೇಲೆ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಪ್ರವಾದಿ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿಯಲ್ಲಿ ಪಾಲು ನೀಡಿ 6ನೇ ಶತಮಾನಯದಲ್ಲಿಯೇ ಮಹಿಳಾ ಹಕ್ಕುಗಳನ್ನು ನೀಡಿ ಗೌರವ ನೀಡಿದರು ಎಂದರು.
ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ಪ್ರವಾದಿಯು ಪ್ರೀತಿಯ ಸಂದೇಶ ಸಾರಿ ಜನರ ಮಧ್ಯ ಪ್ರೀತಿ ಸೇತುವೆ ಕಟ್ಟಿದರು. ಕ್ಷಮಾದಾನ, ಸಹನೆ, ವಿನಮ್ರತೆ ಪ್ರವಾದಿಯವರ ಪ್ರಮುಖ ಗುಣಗಳು ಎಂದು ಅವರ ಜೀವನದ ಘಟನೆಗಳೊಂದಿಗೆ ತಿಳಿಸಿದರು. ಎಲ್ಲಾ ಪ್ರವಾದಿಗಳು ಹಾಗೂ ಮಹಾಪುರುಷರಂತೆ ಪ್ರವಾದಿ ಮಹಮ್ಮದ್ ಅವರು ವೈರಿಯನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ ಅದನ್ನು ಜನರು ಪಾಲಿಸಬೇಕು ಎಂದು ತಿಳಿಸಿದರು.ಹಜ್ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಮುಖ್ಯ ಅತಿಥಿಯಾಗಿ ಪ್ರವಾದಿ ಮಹಮ್ಮದ ಲೇಖನ ಸಂಕಲನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪ್ರವಾದಿ ನುಡಿದಂತೆ ನಾವೆಲ್ಲ ನಡೆಯಬೇಕು ಎಂದು ಸಲಹೆ ನೀಡಿ ಸ್ವರ್ಗ ಒಳ್ಳೆಯ ಸಂಕಲ್ಪದೊಂದಿಗೆ ಮಾಡಿದ್ದ ಉತ್ತಮ ಕರ್ಮಗಳಿಂದ ಸಿಗುತ್ತದೆ ಎಂದು ಹೇಳಿ ಸತ್ಕರ್ಮಗಳನ್ನು ಮಾಡಲು ಜನರಿಗೆ ಪ್ರೇರೇಪಿಸಿದರು.
ಇದೇ ಸಂದರ್ಭದಲ್ಲಿ ಸ್ವರಿಡಾಲಿಟಿ ಯುಥ್ ಮುಮೆಂಟ್ನ ಪೋಸ್ಟರ್ ಬಿಡುಗಡೆ ಮಾಡಿದರು.ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ಕಾರ್ಯದರ್ಶಿ ಅಕ್ಬರ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರವಾದಿ ಅವರು ನಮ್ಮೆಲ್ಲರಿಗೆ ದೇವರ ಸ್ಪಷ್ಟವಾದ ಪರಿಚಯ ಮಾಡಿಸಿದ್ದಾರೆ. ಅವನೊಬ್ಬನೆ ನಮ್ಮ ಸೃಷ್ಠಿಕರ್ತ ಹಾಗೂ ಪ್ರಭು ಆಗಿದ್ದಾನೆ ಎಂದು ಏಕ ದೇವ ಸಂದೇಶ ನೀಡಿದರು. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಡ್ರಗ್ಸ್ ಸಿನೆಮಾ, ಧಾರವಾಹಿ, ಫ್ಯಾಷನ್ ಶೋ, ಸರಾಯಿ ಖಾನೆ ನಡೆಸುವ ಮಾಫಿಯಾ ಕಾರಣವಾಗಿದೆ ಇಂತಹ ಮಾಫಿಯಾಗಳನ್ನು ನಿಯಂತ್ರಿಸಿದಾಗ ಮಾತ್ರ ಇಂತಹ ಅಪರಾಧಗಳನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.
ಮೌಲ್ವಿ ಮಹ್ಮದ ಫಿಹಿಮೋದ್ದಿನ್, ಗೀತಾ ಪಂಡಿತರಾವ್ ಚಿದ್ರಿ ಮಾತನಾಡಿದರು. ಮೊಹ್ಹಮದ್ ಮೌಝಮ್ ಪ್ರಾಸ್ತಾವಿಕವಾಗಿ ಮಾಡಿದರು. ವಿಚಾರಗೋಷ್ಠಿಯನ್ನು ಸೈಯದ್ ಅತಿಕುಲ್ಲ ಅವರ ಪವಿತ್ರ ಕುರ್ಆನ್ನ್ ಪಠಣದಿಂದ ಪ್ರಾರಂಭಿಸಲಾಯಿತು ಇದರ ಕನ್ನಡ ಅನುವಾದವನ್ನು ಸೈಯದ್ ಫುರ್ಖಾನ್ ಪಾಷಾ ಮಾಡಿದರು. ಮಹ್ಮದ ನಿಝಾಮೋದ್ದಿನ್ ಸ್ವಾಗತಿಸಿ ನಿರೂಪಿಸಿದರು.ಡಿಡಿಪಿಐ ಸಲೀಂ ಪಾಷಾ, ಡಾ. ಉಸಾಮೋದ್ದಿನ್ ಉಜೇರ್, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಡಾ. ಕುಮಾರ ದೇಶಮುಖ, ಕ.ಸಾ.ಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾಥ ಗಡ್ಡೆ, ಎಂಎಸ್ ಮನೋಹರ, ಓಂಪ್ರಕಾಶ ರೊಟ್ಟೆ, ಡಾ. ಸಂಜೀವಕುಮಾರ ಅತಿವಾಳೆ, ವೀರಭದ್ರಪ್ಪ ಉಪ್ಪಿನ್ ಉಪಸ್ಥಿತರಿದ್ದರು. ವಿವಿಧ ಧರ್ಮದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು.