ಶಿಕಾರಿಪುರ: ಪಟ್ಟಣದ ಕುಮದ್ವತಿ ವಿದ್ಯಾ ಸಂಸ್ಥೆಯ ಏಕಲವ್ಯ ಕ್ರೀಡಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗ, ಸಂಸದ ರಾಘವೇಂದ್ರರ ಪುತ್ರ ಸುಭಾಷ್ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಖುದ್ದು ಆಗಮಿಸಿ ನೂತನ ವಧು ವರರಿಗೆ ಶುಭ ಹಾರೈಸುವ ಮೂಲಕ ಅಚ್ಚರಿ ಮೂಡಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪನವರ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವೈಮನಸ್ಯದ ಮೂಲಕ ಪಕ್ಷದಿಂದ ದೂರವಾಗಿದ್ದ ಕೆ.ಎಸ್ ಈಶ್ವರಪ್ಪ ಸಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆರೆದಿದ್ದ ಜನಸ್ತೋಮಕ್ಕೆ ಅಚ್ಚರಿ ಉಂಟು ಮಾಡಿದೆ.
ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಅವರೊಂದಿಗೆ ಸುಭಾಷ್ ಹಾಗೂ ಶ್ರವಣಾರ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ಶುಭ ಹಾರೈಸಿ ಆತಿಥ್ಯ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಈಶ್ವರಪ್ಪ ಅವರಿಗೆ ಯಡಿಯೂರಪ್ಪ ನವರು ಶಾಲು ಹೊದಿಸಿ ಸನ್ಮಾನಿಸಿದರು.ಈಶ್ವರಪ್ಪನವರು ಯಡಿಯೂರಪ್ಪ ಕುಟುಂಬದ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬಕ್ಕೆ ಸಮೀಪವಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈಶ್ವರಪ್ಪನವರ ಆಗಮನದ ಮುಂಚೆ ರಾ.ಸ್ವಂ.ಸೇ ಸಂಘದ ಜೇಷ್ಠ ಪ್ರಚಾರಕ ಸು.ರಾಮಣ್ಣ ಆಗಮಿಸಿ ಮಂಗಲ ನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧು ವರರನ್ನು ಹಾರೈಸಿ ತೆರಳಿದ್ದು ಗಮನಾರ್ಹ ಸಂಗತಿ.
ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನಡುವೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಿಂದ ವೈರತ್ವ ಬೆಳೆದಿತ್ತು ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಲ್ಲದೆ ಬಿಎಸ್ವೈ ಕುಟುಂಬದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುತ್ತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಆರ್ಎಸ್ಎಸ್ ಪ್ರಮುಖ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡಿರಲಿಲ್ಲ.