ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಪ್ರಖರವಾಗಿ ಹೋರಾಟ ಮಾಡುತ್ತಿಲ್ಲ. ಬಿಜೆಪಿ ಸತ್ತು ಹೋದಂತಾಗಿದೆ. ಪಕ್ಷದಲ್ಲಿ ಶುದ್ಧೀಕರಣವಾಗಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು. ನಾನು ಇರುವವರೆಗೂ ಬಿಜೆಪಿಯೇ ನನ್ನ ಉಸಿರು. ಕರೆದಾಗ ಮರಳಿ ಹೋಗುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಈ ಹಿಂದೆ ಬಿಜೆಪಿ ಯಾವಾಗಲೂ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿಲ್ಲ. ದಾರಿ ತಪ್ಪಿ ಅಧಿಕಾರ ಬಂದಿದ್ದು, ಪಕ್ಷದಲ್ಲಿ ಸುಧಾರಣೆಯಾದಾಗ ಮಾತ್ರ ಮುಂದಿನ ದಿನಗಳಲ್ಲಿ ಅಧಿಕಾರ ಸಿಗಲು ಸಾಧ್ಯ ಎಂದು ಹೇಳಿದರು.
ನಾನು ಇರುವ ವರೆಗೂ ಬಿಜೆಪಿಯೇ ನನ್ನ ಉಸಿರು. ಅವರು ಕರೆದಾಗ ಮರಳಿ ಹೋಗುತ್ತೇನೆ. ಮರಳಿ ಕರೆಯುವ ವಿಶ್ವಾಸವಿದೆ. ಅದಕ್ಕಾಗಿ ಕಾಯುತ್ತಿದ್ದೇನೆ. ಆದರೆ, ಒಂದಷ್ಟು ಷರತ್ತುಗಳನ್ನು ಮುಂದಿಟ್ಟು ಪಕ್ಷದ ಕಾರ್ಯದದಲ್ಲಿ ಸಕ್ರಿಯನಾಗುತ್ತೇನೆ. ಪುತ್ರನಿಗೆ ಟಿಕೆಟ್ ತಪ್ಪಿಸಿದರು ಎನ್ನುವ ಒಂದೇ ಕಾರಣಕ್ಕಾಗಿ ನಾನು ಬಿಜೆಪಿಯಿಂದ ದೂರ ಉಳಿದಿಲ್ಲ. ಕೆಲವಷ್ಟು ಕಾರಣಗಳೂ ಇವೆ. ಮೊದಲು ಪಕ್ಷ ಶುದ್ಧೀಕರಣವಾಗಬೇಕು ಎನ್ನುವುದು ನನ್ನ ಆಶಯ. ಅದು, ಏನು ಎನ್ನುವುದು ವರಿಷ್ಠರಿಗೆ ತಿಳಿದಿದೆ ಎಂದರು.ಸದ್ಯ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮವೇನೂ ಮಾಡುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಶಾಸಕರಲ್ಲಿ ಅಧಿಕಾರ ದಾಹ ಹೆಚ್ಚಾಗಿರುವುದರಿಂದ, ಆ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ. ರಾಜ್ಯದ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಬೇಕಿತ್ತು ಎಂದ ಈಶ್ವರಪ್ಪ, ಉದ್ಯೋಗವಿಲ್ಲದೆ ಯುವಶಕ್ತಿಯ ಆಕ್ರೋಶ ಭುಗಿಲೆದ್ದಿದೆ ಎಂದು ಎಚ್ಚರಿಸಿದರು.
ಹಿಂದೂಗಳ ಮೇಲೆ ಹಲ್ಲೆ ಹಾಗೂ ದೇಶದ್ರೋಹ ಚಟುವಟಿಕೆಯಲ್ಲಿ ನಿರತರಾಗಿರುವ ಮುಸ್ಲಿಮರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದರೆ, ಬಾಗಲಕೋಟೆಯಲ್ಲಿ ಕಲ್ಲೆಸೆತ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ. ಗೂಂಡಾ ಮನಸ್ಥಿತಿಯವರಿಗೆ ತಾವು ಏನೇ ಮಾಡಿದರೂ ನಡೆಯುತ್ತದೆ, ಸರ್ಕಾರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತದೆ ಎನ್ನುವ ಭಾವನೆ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.